ಒಬ್ಬ ತಂದೆ ಮಗನಿಗೆ ನಲ್ಲಿಯಲ್ಲಿ ನೀರು ತರಲು ಬಿಂದಿಗೆ ಕೊಟ್ಟು ಕಳಿಸಿದ....
ಆ ಬಾಲಕ ಸರಿ ಎಂದು ತಂದೆ ಕೊಟ್ಟ ಬಿಂದಿಗೆ ತೆಗೆದುಕೊಂಡು ನಲ್ಲಿಯ ಕಡೆ ಹೊರಟ....
ದಾರಿಯಲ್ಲಿ ತನ್ನ ಸ್ನೇಹಿತರು ಗೋಲಿಯಾಟ ಆಡುವುದು ಕಾಣಿಸಿತು. ಈ ಹುಡುಗನ ನಿಕ್ಕರ್ ಜೋಬಿನಲ್ಲಿ ಎರಡು ಗೋಲಿಗಳಿವೆ,
ಸ್ವಲ್ಪ ಹೊತ್ತು ಯೋಚಿಸಿ ಬಿಂದಿಗೆಯನ್ನು ಪಕ್ಕಕ್ಕೆ ಇಟ್ಟು, ಆ ಗುಂಪಿನಲ್ಲಿ ಸೇರಿಕೊಂಡು ಗೋಲಿಯಾಟದಲ್ಲಿ ಮಗ್ನನಾದ. ಆಡದಲ್ಲಿ ಗೋಲಿ ಗೆಲ್ಲುತ್ತಾ.... ಸೋಲುತ್ತಾ.... ಕೊನೆಗೆ ತನ್ನ ಬಳಿ ಇದ್ದ ಎರಡೂ ಗೋಲಿಗಳನ್ನು ಸಹ ಸೋತ.
ಆಗ ನೆನಪಾಯಿತು...! ತಾನು ಬಂದ ಕೆಲಸ.... ತಕ್ಷಣ ನೀರಿನ ಬಿಂದಿಗೆ ತೆಗೆದುಕೊಂಡು ನಲ್ಲಿಯ ಬಳಿಗೆ ಹೋಗುತ್ತಾನೆ. ಅಷ್ಟೊತ್ತಿಗಾಗಲೇ ನೀರು ಬಂದ್ ಆಗಿದೆ.
ಖಾಲಿ ಬಿಂದಿಗೆ ತೆಗೆದುಕೊಂಡು ಭಯದಿಂದ ತಂದೆ ಬಳಿ ಬಂದ, ತಂದೆ ಇವನ ಮುಖ ನೋಡಿ ವಿಷಯ ಅರ್ಥ ಮಾಡಿಕೊಂಡು ಬಗ್ಗಿಸಿ ಬೆನ್ನಿಗೆ ನಾಲ್ಕು ಬಿಟ್ಟ.....
ಇದು ಕಥೆ......
ಈಗ ನಾವು ಮಾಡುತ್ತಿರುವುದು ಕೂಡ ಇದೇ ಕೆಲಸ... ತಂದೆ ಸ್ಥಾನದಲ್ಲಿ ದೇವರನ್ನು, ಬಾಲಕನ ಸ್ಥಾನದಲ್ಲಿ ನಿಮ್ಮನ್ನು ಅನ್ವಯಿಸಿಕೊಳ್ಳಿ ಅಥವಾ ಕಲ್ಪಿಸಿಕೊಳ್ಳಿ. ದೇವರು ನಮಗೆ ಒಂದು ಕೆಲಸವನ್ನು ಒಪ್ಪಿಸಿ ಈ ಲೋಕಕ್ಕೆ ಕಳುಹಿಸಿದ್ದರೆ....
ನಾವು ಹಣ, ಕೀರ್ತಿ, ಮೋಸ ಎಂಬ ಗೋಲಿಯಾಟದ ವ್ಯಾಮೋಹದಲ್ಲಿ ಬಿದ್ದು ಒಪ್ಪಿಸಿದ ಕೆಲಸವನ್ನು ಮರೆತು, ತೀರಾ ವಯಸ್ಸಾದ ಬಳಿಕ ಆ ಕೆಲಸವನ್ನು ನೆನಪಿಸಿಕೊಂಡರೂ ನಮ್ಮ ಶರೀರ ಅದಕ್ಕೆ ಸಹಕರಿಸದು.
ನಾವು ಮಾಡಿಕೊಂಡ ಅಶಾಶ್ವತ ಸಂಬಂಧಗಳು, ದುಶ್ಚಟಗಳು ಮಾಡದಂತೆ ತಡೆಯುತ್ತವೆ. ಸಾವು ಹತ್ತಿರವಾದಂತೆ ಪಾಪಪ್ರಜ್ಞೆ ಶುರುವಾಗುತ್ತದೆ.
ಆಗ ತಂದೆಯ(ದೇವರ) ಏಟುಗಳನ್ನು ತಪ್ಪಿಸಿಕೊಳ್ಳಲು ತಂದೆಗೇ ಲಂಚಕೊಡಲು ಸಹ ಮುಂದಾಗುತ್ತೇವೆ, ಅಂದರೆ ದೇವಸ್ಥಾನದ ಹುಂಡಿಗಳಿಗೆ ಕಾಣಿಕೆಗಳನ್ನು ಹಾಕುವುದು.
ಆದರಿಂದ ಈಗಲಾದರೂ ಕಣ್ಣು ತೆರೆಯಿರಿ, ಕಷ್ಟದಲ್ಲಿರುವ ವ್ಯಕ್ತಿಗಳಿಗೆ ಸಹಾಯ ಮಾಡಿ, ನಿಮ್ಮ ತಂದೆತಾಯಿಯರ ಸೇವೆ ಮಾಡಿ, ಮನುಷ್ಯರಾಗಿ ಭೂಮಿ ಮೇಲೆ ಬಂದಿದ್ದೇವೆ ಮನುಷ್ಯರಾಗಿ ಬದುಕೋಣ....
ಯಾವ ಕ್ಷಣದಲ್ಲಿ ಯಾವ ರೀತಿ ಮೃತ್ಯು ಬರುವುದು ಗೊತ್ತಿಲ್ಲ .... ಹಾಗಾಗಿ ದೇವರಿಗೆ ಬೇಕಾದ Bank Balance (ಪುಣ್ಯ ಸಂಪಾದನೆ) ಅನ್ನು ನಮ್ಮ ಬಳಿ ಇಟ್ಟುಕೊಳ್ಳೋಣ...
Subscribe , Follow on