-->

Scientific reasons behind Sankranthi festival culture practices

ಎಳ್ಳು ಸ್ವೀಕಾರಕ್ಕೆ ವೈಜ್ಞಾನಿಕ ಕಾರಣ  

ಧನುರ್ಮಾಸದಲ್ಲಿ ದೇಹಕ್ಕೆ ಉಂಟಾಗುವ ತೊಂದರೆಗಳನ್ನು ನಿವಾರಿಸುವ ಉದ್ದೇಶದಿಂದ ಹುಗ್ಗಿಯನ್ನು ಸೇವಿಸುತ್ತೇವೆ. ಏಕೆಂದರೆ ಛಳಿಗಾಲವು ಧನುರ್ಮಾಸದಲ್ಲಿ ಉಲ್ಭಣವಾಗಿರುತ್ತೆ. ಈ ಕಾಲದಲ್ಲಿ ಮಲಬದ್ಧತೆಯಾಗಿ ತೊಂದರೆಯಾಗಿರುತ್ತೆ. ಏಕೆಂದರೆ ಛಳಿಗಾಲದಲ್ಲಿ ಶರೀರದಲ್ಲಿರುವ ಉಷ್ಣಾಂಶವು ಹೆಚ್ಚು ವ್ಯಯವಾಗಿ, ಅದನ್ನು ಸರಿದೂಗಿಸಲು ವಾತಾವರಣವು ಸರಿಯಾಗಿರದೆ ಚರ್ಮ ಸುಕ್ಕು ಕಟ್ಟುತ್ತದೆ. ಎರಡನೆಯದಾಗಿ ಯಾವಾಗ ಚರ್ಮದ ಉಷ್ಣಾಂಶವು ಕಮ್ಮಿಯಾಗತ್ತೋ ಆಗ ಚರ್ಮ ಬಿರಿಯತ್ತೆ.  ಶಾಸ್ತ್ರದ ಪ್ರಕಾರ ಹುಗ್ಗಿಯನ್ನು ಪ್ರಾತ: ಕಾಲ ಸೇವಿಸಿದರೆ ಮೇಲೆ ಹೇಳಿದ ಶರೀರದ ಕೊರತೆಯೆಲ್ಲ ಸರಿದೂಗುತ್ತೆ.  ಧನುರ್ಮಾಸ ಕಳೆದು ಮಕರ ಮಾಸ ಆರಂಭ ವಾಗುವವರೆಗೆ ಮನುಷ್ಯನ ದೇಹದಲ್ಲಿನ ಕೊಬ್ಬಿನ ಅಂಶ ಅವಶ್ಯಕತೆಯಷ್ಟು ಇರುವುದಿಲ್ಲ. ಕಮ್ಮಿ ಇರುತ್ತದೆ.  ಉತ್ತರಾಯಣಕಾಲದಿಂದ  ಶೆಖೆ ಪ್ರಾರಂಭವಾಗುವುದರಿಂದ ಈ ದೇಹಕ್ಕೆ ಅತ್ಯವಶ್ಯಕವಾದ ಕೊಬ್ಬಿನ ಅಂಶ ಸರಿದೂಗದಿದ್ದರೆ ಮುಂದೆ ಬಿಸಿಲಿನ ತಾಪದಿಂದ ಅನೇಕ ತೊಂದರೆಯಾಗುತ್ತೆ. ಇದನ್ನು ತಪ್ಪಿಸಲು ಮುಂಜಾಗರೂಕತೆಗಾಗಿ ಎಳ್ಳನ್ನು ಉಪಯೋಗ ಮಾಡಬೇಕು. ವೈದ್ಯ ಶಾಸ್ತ್ರ ಮತ್ತು ಆಹಾರಶಾಸ್ತ್ರ ಪ್ರಕಾರ ಶರೀರದ ಚರ್ಮ, ನೇತ್ರ, ಮತ್ತು ಅಸ್ತಿ ಇವುಗಳ ಬೆಳವಣಿಗೆಗೆ ಬೇಕಾದ ’ಎ’ ಮತ್ತು ’ಬಿ’ ವಿಟಮಿನ್ಸ್ ಕೊಬ್ಬಿನಲ್ಲಿವೆ. ತೈಲಧಾನ್ಯವಾದ ಎಳ್ಳಿನಲ್ಲಿ ಈ ವಿಟಮಿನ್ಸ್ ಹೇರಳವಾಗಿರುವುದ ರಿಂದ ಎಳ್ಳು ಒಳ್ಳೆಯದು.

“ಎಳ್ಳು ಬೆಲ್ಲ ತಿಂದು  ಒಳ್ಳೆ ಮಾತಾಡು”.
 

ನವಗ್ರಹಗಳಿಗೆ ನವಧಾನ್ಯ ಹೇಳುತ್ತಾರೆ. ನವಧಾನ್ಯಗಳಲ್ಲಿ ಎಳ್ಳು ಮಾತ್ರ ತೈಲಧಾನ್ಯ. ಉಳಿದವು ಯಾವುದೂ ತೈಲಧಾನ್ಯವಲ್ಲ. ಆದ್ದರಿಂದ ಎಳ್ಳನ್ನು ತಿನ್ನಬೇಕೆಂದಿದ್ದಾರೆ, ಬರೀ ಎಳ್ಳು ತಿಂದರೆ ಪಿತ್ತ ಜಾಸ್ತಿಯಾಗತ್ತೆ. ಅದಕ್ಕೇ ಪಿತ್ತಹರವಾದ ಬೆಲ್ಲವನ್ನೂ ಸೇರಿಸಿ ತೆಗೆದುಕೊಂಡರೆ ಕೊಬ್ಬಿನ ಅಂಶ ಸರಿದೂಗುತ್ತೆ. ಸ್ವಭಾವತ: ಬೆಲ್ಲವೂ ಪಿತ್ತದ ಗುಣವುಳ್ಳದಾದ್ದರಿಂದ ಎಳ್ಳಿನ ಜೊತೆ ತೆಗೆದುಕೊಂಡರೆ ಪಿತ್ತವನ್ನು ಸ್ಥಿಮಿತದಲ್ಲಿಡುತ್ತೆ. “ಉಷ್ಣೇನ ಉಷ್ಣಂ ಶೀತಲಂ” ಎನ್ನುವ ಹಾಗೆ ಪಿತ್ತವನ್ನು ಪಿತ್ತದಿಂದ ನಾಶ ಮಾಡುವುದೇ ಎಳ್ಳುಬೆಲ್ಲ.  ಹಸಿ ಎಳ್ಳಿನ ದೋಷ ನಿವಾರಣೆಗಾಗಿ ಹುರಿದು ಉಪಯೋಗಿಸಬೇಕು. ಇದರ ಜೊತೆಗೆ ರುಚಿಗೋಸ್ಕರ, ಕೊಬ್ಬಿನ ಅಂಶವಿರುವ ಕಡ್ಲೇಕಾಯಿ ಬೀಜವನ್ನು ಬೆರೆಸಿ ತಿನ್ನಬೇಕೆಂದಿದ್ದಾರೆ. ಎಳ್ಳಿಗೆ ವಾತ, ವ್ರಣ, ಮತ್ತು ಚರ್ಮರೋಗ ನಿವಾರಣೆ ಮಾಡುವ ಗುಣವಿದೆ. ರಕ್ತವೃದ್ಧಿ ಮಾಡುತ್ತೆ.

ಸಂಕ್ರಾಂತಿ ದಿನ ಸಂಜೆ ಮಕ್ಕಳನ್ನು ಕೂಡಿಸಿ ಆರತಿ ಮಾಡಿ ಬೋರೇ ಹಣ್ಣು (ಎಳಚಿ ಹಣ್ಣು), ಕಬ್ಬಿನ ಚೂರು, ನಾಣ್ಯಗಳನ್ನು ಹಾಕುತ್ತಾರೆ. ಏಕೆಂದರೆ



ಮಕರ ಸಂಕ್ರಾಂತಿಯ ಸಂಜೆ ಐದು ವರ್ಷದ ಒಳಗಿನ ಮಕ್ಕಳನ್ನು ಕೂಡಿಸಿ, ಆರತಿ ಮಾಡಿ ಅವರಿಗೆ ಬೋರೇ ಹಣ್ಣು (ಎಲಚೇ ಹಣ್ಣು) ಕಬ್ಬಿನ ಜಲ್ಲೆಯ ಚೂರು ಮತ್ತು ನಾಣ್ಯಗಳನ್ನು ಕೂಡಿಸಿ ಅವರ ತಲೆಯ ಮೇಲೆ ಎರೆಯುವುದು ಮಾಡುತ್ತೇವೆ. ಏಕೆ ? ಇದಕ್ಕೂ ವೈಜ್ಞಾನಿಕ ಕಾರಣವಿದೆ. ಆಯುರ್ವೇದ ರೀತ್ಯ ನೆಗಡಿ, ಕೆಮ್ಮು, ಮೂಲವ್ಯಾಧಿ, ಸುಟ್ಟಗಾಯ, ಬೆವರುವುದು, ಬಿಕ್ಕಳಿಕೆ ಮೊದಲಾದ್ದಕ್ಕೆ ಎಲಚಿಹಣ್ಣಿನಿಂದ ಮಾಡಿದ ಔಷಧಿಗಳು ಬಹಳ ಪರಿಣಾಮಕಾರಿ. ಇಷ್ಟೇ ಅಲ್ಲ, ಅವು ಮಕ್ಕಳಲ್ಲಿನ ತುಂಟತನ, ಹಠಮಾರಿತನ ಹೋಗಲಾಡಿಸಲೂ ಸಹಕಾರಿ. ಎಲಚೆ ಹಣ್ಣಿನ ಕಷಾಯವನ್ನು ಇಂತಹ ಮಕ್ಕಳಿಗೆ ಕೊಡುವ ವಾಡಿಕೆಯಿದೆ. ಆದ್ದರಿಂದ ಅದರ ಸ್ಪರ್ಷದಿಂದ ಕೂಡ ಅದರ ಗುಣ ಬರುತ್ತದೆ.

ಸುಮ್ಮನೆ ತಲೆಯ ಮೇಲೆ ಈ ಹಣ್ಣು ಬಿದ್ದರೆ ತುಂಟತನ ಹೇಗೆ ಹೋಗುತ್ತೆ? ಮನುಷ್ಯನ ದೇಹವೂ ಕೂಡ ಒಂದು ವಿದ್ಯುತ್ ಕೇಂದ್ರ.  ಸದಾ ವಿದ್ಯುಚ್ಛಕ್ತಿ ಉತ್ಪಾದನೆ ಮತ್ತು ವಿಸರ್ಜನೆ ಆಗುತ್ತಿರುತ್ತದೆ. ಈ ಉತ್ಪಾನೆಯ ಮುಖ್ಯ ಕೇಂದ್ರ ಬ್ರಹ್ಮಾಂಡವೂ (ನೆತ್ತಿ) ಒಂದು. ಎಲಚಿ ಹಣ್ಣನ್ನು ತಲೆಯ ಮೇಲೆ ಹಾಕಿದಾಗ ಇದರ ಸ್ಪರ್ಶ ಮಾತ್ರದಿಂದ ದೇಹದಲ್ಲಿರುವ ವಿದ್ಯುತ್ ಈ ಗುಣವನ್ನು ಸ್ವಲ್ಪ ಆಕರ್ಷಿಸುತ್ತದೆ. ಇದಕ್ಕೆ ಎಲೆಕ್ಟ್ರೋ ಮಾಗ್ನೆಟಿಸಂ ಎನ್ನುತ್ತಾರೆ. ಹೀಗೆ ಆಕರ್ಷಿಸಲ್ಪಟ್ಟ ಎಲಚಿ ಹಣ್ಣಿನ ಗುಣವು ನೆತ್ತಿಯಲ್ಲಿರುವ ಸಂಬಂಧಿಸಿದ ನರಗಳ ಮೇಲೆ ಪ್ರಭಾವ ಬೀರಿ ಈ ಹಠಮಾರಿತನಕ್ಕೆ ಸಂಬಂಧಿಸಿದ ನರಗಳು ಸುಧಾರಿಸುತ್ತವೆ. ತುಂಟತನ ಕಡಿಮೆಯಾಗುತ್ತದೆ. ಎಳಚಿಹಣ್ಣಿನಲ್ಲಿ ಅನುದ್ವೇಗಪಡಿಸುವ ಗುಣ ಇದೆ ಎಂದಾಯಿತು. ಇದು ಮುಂಜಾಗರೂಕತೆ ದೃಷ್ಟಿಯಿಂದ ಹಿಂದಿನವರು ಮಾಡಿದ್ದು ನಮಗೆ ಸಂಪ್ರದಾಯವಾಗಿ ಕಂಡುಬಂದರೂ ವೈಜ್ಞಾನಿಕವೂ ಹೌದು.

ಬೋರೇ ಹಣ್ಣಿನ ಜೊತೆ ಕಬ್ಬಿನ ಚೂರು ಮತ್ತು ನಾಣ್ಯಗಳನ್ನೂ ಹಾಕುತ್ತಾರೆ. ಮಕ್ಕಳಿಗೆ ಸಿಹಿ ಅಂದರೆ ಇಷ್ಟ. ಕಬ್ಬಿನ ಹಣ್ಣಿನ ಚೂರು ಗಳನ್ನು ತಿನ್ನಲು ಆಸಕ್ತರಾಗು ಹಸೆಮಣೆ ಮೇಲೆ ಕೂಡುತ್ತಾರೆ. ಅಲ್ಲದೆ ಕಬ್ಬಿನ ರಸ ಪಿತ್ತಹರ. ಉತ್ತರಾಯಣ ಕಾಲದಲ್ಲಿ ಉಷ್ಣವು ಜಾಸ್ತಿ ಯಾಗುವುದರ ಮೂಲಕ ಪಿತ್ತ ಸಂಬಂಧಿ ದೋಷಗಳು ಬಾರದಿರಲಿ ಎಂದು ಕಬ್ಬಿನ ಉಪಯೋಗ ಮಾಡಿದ್ದಾರೆ.

ಮಕರ ಸಂಕ್ರಮಣವು ಪುಷ್ಯ ಮಾಸದಲ್ಲೇ ಸಾಮಾನ್ಯವಾಗಿ ಬರುತ್ತದೆ. ಶನಿಯ ನಕ್ಷತ್ರ ಪುಷ್ಯ. ಪುಷ್ಯಕ್ಕೆ ಬೃಹಸ್ಪತಿ ಅಧಿದೇವತೆ. ಶನಿಗೆ ಯಮ ಅಧಿದೇವತೆ. ಯಮ ಅಂದರೆ ಸಂಯಮ ಎಂದೂ ಅರ್ಥ. ಶನಿ ಜೀವ ನಾಡಿಗೆ ಕಾರಕ. ಉತ್ತರಾಯಣದಲ್ಲಿ ರವಿಯು ಮಕರ ರಾಶಿಗೆ ಪ್ರವೇಶಿಸುತ್ತಿದ್ದ ಹಾಗೆ ಹವಾ ಬದಲಾವಣೆಯಾಗಲು ಆರಂಭವಾಗುತ್ತದೆ. ಇದು ಎಳೆ ಮಕ್ಕಳ ಮೇಲೆ ಪ್ರಭಾವಕಾರಿ. ಮಕ್ಕಳ ಮೇಲೆ ಹೃದಯ ಬಡಿತ ಮತ್ತು ರಕ್ತ ಚಲನೆಯನ್ನು ಜೀವನಾಡಿಯು ಚುರುಕುಗೊಳಿಸುತ್ತದೆ. ಇದನ್ನು ಹತೋಟಿಯಲ್ಲಿಡಲೂ ಎಲಚಿ ಹಣ್ಣು ಸಹಾಯಕಾರಿ.

–>