-->

ವಿಶ್ವಾಸ - Trust

 ವಿಶ್ವಾಸ ಕಳೆದುಕೊಳ್ಳಲು ಒಂದು ಕ್ಷಣ ಸಾಕು, ಆದರೆ ಕಳೆದುಕೊಂಡ ವಿಶ್ವಾಸ ಮತ್ತೆ ಗಳಿಸಲು ಜೀವನವಿಡಿ ಬೇಕಾಗುತ್ತದೆ. ವಿಶ್ವಾಸ ಕಳೆದುಕೊಂಡು ಬದುಕಬಾರದು. ವಿಶ್ವಾಸ ಮನುಷ್ಯನ ವ್ಯಕ್ತಿತ್ವ ರೂಪಿಸುತ್ತದೆ. ಕೆಲಸ ಮಾಡುವ ಕಚೇರಿಯಲ್ಲಾಗಲಿ, ಬಂಧು ಬಳಗದವರಲ್ಲಾಗಲಿ, ಹೆಂಡತಿ ಮಕ್ಕಳ ಜತೆ ವಿಶ್ವಾಸ ಕಳೆದುಕೊಳ್ಳಬಾರದು. ವಿಶ್ವಾಸ ಕಳೆದುಕೊಂಡರೆ ಯಾರೂ ಗೌರವ ನೀಡುವುದಿಲ್ಲ. ನಂಬಿಕಸ್ಥನಲ್ಲ ಅವರ ಹತ್ತಿರ ವ್ಯವಹಾರ ಮಾಡವುದು ಬೇಡ ಎಂದು ಎಲ್ಲರೂ ನಮ್ಮಿಂದ ದೂರಾಗುತ್ತಾರೆ. 

 

ವಿಶ್ವಾಸ - Trust

ನಂಬಿಕೆ ಉಳಿಸಿಕೊಂಡು ಬದುಕಿದರೆ ಜೀವನ ಪೂರ್ತಿಗೌರವ ಸಿಗುತ್ತದೆ. ಪ್ರತಿಯೊಬ್ಬ ಮನುಷ್ಯನಿಗೂ ತನ್ನದೇ ಆದ ಮರ್ಯಾದೆ ಇರುತ್ತದೆ. ಗೌರಯುತ ಬದುಕು ಸಾಗಿಸಬೇಕು ಎಂಬ ಕನಸು ಕಾಣುತ್ತಿರುತ್ತಾರೆ. ಆದರೆ ವಿಶ್ವಾಸ ಕಳೆದುಕೊಂಡರೆ ಆ ಕನಸು ನನಸಾಗುವುದೇ ಇಲ್ಲ ಜೀವನ ಪೂರ್ತಿ ನನಸಾಗಿಯೇ ಉಳಿಯುತ್ತಿದೆ. ಒಂದು ಸುಳ್ಳನ್ನು ಮುಚ್ಚಿಕೊಳ್ಳಲು ನೂರು ಸುಳ್ಳು ಹೇಳಬೇಕಾಗುತ್ತದೆ. ಇಷ್ಟಾದರೂ ಸತ್ಯ ಗೊತ್ತಾದಾಗ ವಿಶ್ವಾಸ ಕಳೆದುಕೊಳ್ಳಬೇಕಾಗುತ್ತದೆ. ಸತ್ಯ ಹೇಳಿದರೆ ಆ ಕ್ಷಣದಲ್ಲಿ ಬೇಜಾರವಾಗಬಹುದು ಆದರೆ ವಿಶ್ವಾಸ ಉಳಿಯುತ್ತದೆ. ವಿಶ್ವಾಸ ಮತ್ತು ಶ್ವಾಸ ಗಳ ನಡುವೆ ಒಂದಕ್ಷರ ವ್ಯತ್ಯಾಸವಿದೆ. ಶ್ವಾಸ ಕಳೆದುಕೊಂಡ ವ್ಯಕ್ತಿ ಬದುಕಲಾರ. ವಿಶ್ವಾಸ ಕಳೆದುಕೊಂಡ ವ್ಯಕ್ತಿ ಬದುಕಿ ಸತ್ತಂತೆ. ಮೋಸ, ಅಪನಂಬಿಕೆ, ದ್ರೋಹ ಇವೆಲ್ಲವು ಇಂದು ಮೆರೆಯುತ್ತಿವೆ. ಇಂತ ಸಂದರ್ಭದಲ್ಲಿ ಪ್ರಾಮಾಣಿಕತೆ ನಡೆಯುವುದಿಲ್ಲ ಎಂದು ನಾವು ಅಂದುಕೊಳ್ಳಬಹುದು. ಸತ್ಯಕ್ಕೆ ಯಾವಾಗಲೂ ಜಯ ಸಿಕ್ಕೆ ಸಿಗುತ್ತದೆ. ಸುಳ್ಳು ಹೇಳಿ, ವಿಶ್ವಾಸ ಕಳೆದುಕೊಂದು ಕ್ಷಣಿಕ ಸುಖ ಅನುಭವಿಸುವ ಬದಲು ಸತ್ಯ ಹೇಳಿ ವಿಶ್ವಾಸಿಕರಾಗಿ ನೂರ್ಕಾಲ ಸುಖವಾಗಿ ಬಾಳುವುದನ್ನು ರೂಢಿಸಿಕೊಳ್ಳಬೇಕು.


ವಿಶ್ವಾಸ ಎಂಬುವುದು ಮಾರುಕಟ್ಟೆಯಲ್ಲಿ ಸಿಗುವ ವಸ್ತು ವಲ್ಲ. ನಮ್ಮಲ್ಲೆ ಇರುತ್ತದೆ. ಅದನ್ನು ಹೊರಹಾಕಲು ಪ್ರಯತ್ನಿಸಬೇಕು. ವಿಶ್ವಾಸದಿಂದ ಬದುಕು ಸಾಗಿಸಿ ಉತ್ತಮ ವ್ಯಕ್ತಿ ಎನಿಸಿಕೊಳ್ಳಬೇಕು. ಮನುಷ್ಯರಿಗೆ ಮರ್ಯಾದೇ ಸಿಗುವುದೇ ವಿಶ್ವಾಸದಿಂದ ಅದನ್ನೇ ಕಳೆದುಕೊಂಡು ಬದುಕು ಸಾಗಿಸುವುದು ಕಷ್ಟ. ವಿಶ್ವಾಸ ಮತ್ತು ಆತ್ಮ ವಿಶ್ವಾಸ ಎರಡು ಅಗತ್ಯ. ಯಾರೂ ಏನೆ ಹೇಳಲಿ ನನ್ನ ಬಗ್ಗೆ ನನಗೆ ಗೊತ್ತು ಎಂಬುದು ಆತ್ಮ ವಿಶ್ವಾಸ. ಇಂದಿನ ಸಮಾಜದಲ್ಲಿ ಆತ್ಮ ವಿಶ್ವಾಸ ಅತಿ ಮುಖ್ಯವಾಗಿದೆ. ಶ್ವಾಸ ಇರುವ ವರೆಗೂ ವಿಶ್ವಾಸ ಕಳೆದುಕೊಳ್ಳುವುದಿಲ್ಲ ಎಂಬ ಆತ್ಮ ವಿಶ್ವಾಸ ಹೊಂದಿರಬೇಕು. ವಿಶ್ವಾಸ ವೇ ನಮಗೆ ಶ್ವಾಸವಾಗಬೇಕು ಅಂದಾಗ ಮಾತ್ರ ವಿಶ್ವ ಮೆಚ್ಚುವ ಬದುಕು ನಮ್ಮದಾಗುತ್ತದೆ. ಸ್ವಾರ್ಥಕ್ಕಾಗಿ ವಿಶ್ವಾಸ ಕಳೆದುಕೊಂಡರೆ ಶ್ವಾನದಂತೆ ನಮ್ಮ ಬದುಕಾಗುತ್ತದೆ. ಮನುಷ್ಯರಾಗಿ ವಿಶ್ವಾಸದಿಂದ ಜೀವನ ನಡೆಸುವ ಮೂಲಕ ಉಜ್ಜೀವನ ನಡೆಸಬೇಕು. ಜೀವನ ಎಂದರೆ ಕೇವಲ ಹೊಟ್ಟೆ ತುಂಬಿಸಿಕೊಳ್ಳುವುದಷ್ಟೇ ಅಲ್ಲ. ನಂಬಿಕೆಯಿಂದ ಜೀವಿಸುವುದೇ ನಿಜವಾದ ಜೀವನ. ವಿಶ್ವಾಸಕ್ಕೆ ಇಡಿ ಜಗತ್ತೇ ಗೌರ ಸಲ್ಲಿಸುತ್ತದೆ. ಸಂಪತ್ತು ಗಳಿಸಿ ವಿಶ್ವಾಸ ಕಳೆದುಕೊಂಡರೆ ಯಾರೂ ನಂಬುವುದಿಲ್ಲ. ಬಡವನಾಗಿದ್ದರೂ ವಿಶ್ವಾಸಿಕನಾಗಿದ್ದರೆ ಜನರು ನಂಬುತ್ತಾರೆ. ನಾವು ಸಂಪಾದಿಸುವುದು ಹಣವಲ್ಲ ವಿಶ್ವಾಸ ಎಂಬ ಸತ್ಯವನ್ನು ಅರಿಯಬೇಕು. ಹಣ ಸಂಪಾದಿಸಿ ವಿಶ್ವಾಸ ವಿಲ್ಲದೆ ನಮ್ಮವರನ್ನೆಲ್ಲ ಕಳೆದುಕೊಳ್ಳುವ ಬದಲು ವಿಶ್ವಾಸ ಗಳಿಸಿ ನಮ್ಮವರನ್ನು ಉಳಿಸಿಕೊಂಡರೆ ಸಂಪತ್ತು ತಾನಾಗಿಯೇ ಸಿಗುತ್ತದೆ. ನಮ್ಮವರು ಎಂಬ ಭಾವನೆ ಇದ್ದಾಗ ಯಾರೂ ವಿಶ್ವಾಸ ಕಳೆದುಕೊಳ್ಳಲು ಬಯಸುವುದಿಲ್ಲ. ಅಧುನಿಕ ಭರಾಟೆಯಲ್ಲಿ ವಿಶ್ವಾಸಕ್ಕೆ ಬೆಲೆ ಕಡಿಮೆಯಾಗುತ್ತಿದೆ. ವಿಶ್ವಾಸ ವಿಶ್ವ ವ್ಯಾಪಿಯಾಗಿ ಬೆಳೆಯಬೇಕು. ನಾವೆಲ್ಲರೂ ವಿಶ್ವಾಸಿಕ ಜೀವನ ನಡೆಸಲು ಸಂಪಕಲ್ಪ ಮಾಡೋಣ.


| ಶಾಮಸುಂದರ ಕುಲಕರ್ಣಿ, ಕಲ್ಬುರ್ಗಿ

–>