-->

ಅಷ್ಟ ಲಕ್ಷ್ಮಿ ಮಹತ್ವ , Significance of Astha Lakshmi

ಮಹಾಲಕ್ಷ್ಮಿಯನ್ನು 8 ರೂಪಗಳಲ್ಲಿ ಪೂಜಿಸಲಾಗುತ್ತದೆ. ಮಹಾಲಕ್ಷ್ಮಿಯ ಈ 8 ಅವತಾರವನ್ನೇ ನಾವು ಅಷ್ಟ ಲಕ್ಷ್ಮಿ ಯೆಂದು ಕರೆಯುತ್ತೇವೆ. ಅಷ್ಟ ಲಕ್ಷ್ಮಿಯರು  ಅವತಾರಗಳಾವುವು ಗೊತ್ತೇ..? ಅಷ್ಟ ಲಕ್ಷ್ಮಿಯರ ಮಹತ್ವವೇನು ತಿಳಿದುಕೊಳ್ಳಿ.
    
ಸೌಂದರ್ಯ, ವಿದ್ಯೆ, ಬುದ್ಧಿ, ಸಂಪತ್ತು ಮತ್ತು ಸಮೃದ್ಧಿಯ ಅಧಿದೇವತೆಯಾದ ತಾಯಿ ಮಹಾಲಕ್ಷ್ಮಿಯನ್ನು 8 ರೂಪಗಳಲ್ಲಿ ನೋಡಬಹುದಾಗಿದ್ದು, ಈ 8 ರೂಪದ ಲಕ್ಷ್ಮಿಯನ್ನೇ ಅಷ್ಟ ಲಕ್ಷ್ಮಿಯೆಂದು ಕರೆಯಲಾಗುತ್ತದೆ. ಅಷ್ಟ ಲಕ್ಷ್ಮಿಯರನ್ನು ಪೂಜಿಸುವುದರಿಂದ ನಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳು ದೂರಾಗುತ್ತದೆ ಎನ್ನುವ ನಂಬಿಕೆಯಿದೆ. ಅಷ್ಟ ಲಕ್ಷ್ಮಿ ಎಂದರೆ ಸಮೃದ್ಧಿ, ಫಲವತ್ತತೆ, ಸಂತೋಷ ಅಥವಾ ಅದೃಷ್ಟ, ಉತ್ತಮ ಆರೋಗ್ಯ, ಜ್ಞಾನ, ಬಲ, ಸಂತಾನ ಮತ್ತು ಶಕ್ತಿ.


ಆದಿ ಲಕ್ಷ್ಮೀ

ಆದಿ ಲಕ್ಷ್ಮಿ ಎಂಬುದು ಪ್ರಾಚೀನ ರೂಪ ಮತ್ತು ಎಲ್ಲರ ಅಸ್ಥಿತ್ವಕ್ಕೆ ಕಾರಣೀಭೂತಳಾಗಿದ್ದಾಳೆ. ಆಕೆ ತನ್ನ ಪತಿಯನ್ನು ಆರೈಕೆ ಮಾಡುವ ಮೂಲಕ ಇಡೀ ಜಗತ್ತನ್ನೇ ರಕ್ಷಿಸುವ ಹೊಣೆ ಹೊತ್ತಿರುತ್ತಾಳೆ ಎಂಬ ನಂಬಿಕೆಯಿದೆ. ಸಮುದ್ರ ಮಂಥನದ ಸಮಯದಲ್ಲಿ ಆದಿ ಲಕ್ಷ್ಮಿಯು ಜನಿಸುತ್ತಾಳೆ. ಲಕ್ಷ್ಮಿಯು ತನ್ನ ನಾಲ್ಕು ಕೈಗಳನ್ನು ಹೊಂದಿದ್ದು, ಕಮಲದ ಮೇಲೆ ಆಸೀನಳಾಗಿದ್ದಾಳೆ. ಆಕೆಯ ನಾಲ್ಕು ಕೈಗಳಲ್ಲಿ ಎರಡು ಕೈಯಲ್ಲಿ ಅಭಯ ಮುದ್ರೆಯನ್ನು ಹೊಂದಿದ್ದಾಳೆ. ಇನ್ನಿತರ ಎರಡು ಕೈಗಳಲ್ಲಿ ಕಮಲ ಮತ್ತು ಶ್ವೇತ ಧ್ವಜವನ್ನು ಹಿಡಿದುಕೊಂಡಿದ್ದಾಳೆ.

ಮಹತ್ವ: ಆದಿ ಲಕ್ಷ್ಮಿಯು ಮೋಕ್ಷವನ್ನು ನೀಡುವಲ್ಲಿ ಖ್ಯಾತಿಯನ್ನು ಹೊಂದಿದ್ದು, ಈ ಕಾರಣದಿಂದ ಆದಿ ಲಕ್ಷ್ಮಿಯನ್ನು ಮೋಕ್ಷ ಪ್ರದಾಯಿನಿ ಎಂದು ಕರೆಯಲಾಗುತ್ತದೆ. ಆದಿಲಕ್ಷ್ಮಿ ಸ್ವತಃ ಮಹಾಲಕ್ಷ್ಮಿಯಾಗಿರುವುದರಿಂದ ಆಕೆಯನ್ನು ಎಲ್ಲಾ ದೇವರುಗಳು ಪೂಜಿಸುತ್ತಾರೆ.

ಅಷ್ಟ ಲಕ್ಷ್ಮಿ ಮಹತ್ವ , Significance of Astha Lakshmi


ಧನ ಲಕ್ಷ್ಮೀ

ಸಂಪತ್ತಿನ ಅಧಿದೇವತೆಯಾದ ಧನ ಲಕ್ಷ್ಮಿಯು ಮಾತೃ ಲಕ್ಷ್ಮಿ ದೇವಿಯ ಅಭಿವ್ಯಕ್ತಿಯಾಗಿದ್ದಾಳೆ. ಧನ ಲಕ್ಷ್ಮಿ ಸಮೃದ್ಧಿ ಮತ್ತು ಸಂಪತ್ತಿನ ಸಂಕೃತವಾಗಿದ್ದಾಳೆ. ಬಡತನವನ್ನು ನಾಶ ಮಾಡುವಲ್ಲಿ ಈಕೆಯ ಪಾತ್ರ ಅಪಾರ. ಕಷ್ಟಪಟ್ಟು ಶ್ರಮಿಸುವವರನ್ನು ಎಂದಿಗೂ ಕೈಬಿಡದೇ ಸಂಪತ್ತು ಮತ್ತು ಆರ್ಥಿಕ ಸ್ಥಿರತೆಯತ್ತ ಮಾರ್ಗವನ್ನು ಸೂಚಿಸುವಳು. ಭಕ್ತರ ಎಲ್ಲಾ ಆರ್ಥಿಕ ಸಂಕಷ್ಟವನ್ನು ಧನ ಲಕ್ಷ್ಮಿ ದೂರಾಗಿಸುತ್ತಾಳೆ. 6 ಕೈಗಳನ್ನು ಹೊಂದಿರುವ ಈಕೆ ಕೆಂಪು ಸೀರೆಯನ್ನುಟ್ಟು ತನ್ನ ಕೈಗಳಲ್ಲಿ ಶಂಖ, ಕುಂಭ, ಚಕ್ರ, ಬಿಲ್ಲು ಬಾಣ, ಕಮಲವನ್ನು ಹಿಡಿದುಕೊಂಡಿದ್ದಾಳೆ. 6 ನೇ ಕೈಯಲ್ಲಿ ಅಭಯ ಮುದ್ರೆಯಿದ್ದು, ಚಿನ್ನದ ನಾಣ್ಯಗಳನ್ನು ಕೈಗಳಿಂದ ಹರಿಬಿಟ್ಟಿದ್ದಾಳೆ.

ಮಹತ್ವ: ಧನ ಎಂದರೆ ಸಂಪತ್ತನ್ನು ಸೂಚಿಸುತ್ತದೆ. ಧನಲಕ್ಷ್ಮಿಯನ್ನು ಪೂಜಿಸುವುದರಿಂದ ಸಮೃದ್ಧಿ, ಸಂಪತ್ತು, ಸಂತೋಷ ಪ್ರಾಪ್ತವಾಗುತ್ತದೆ. ಧನಲಕ್ಷ್ಮಿಯು ನಮಗೆ ಹಣ, ಚಿನ್ನ, ಆಸ್ತಿ, ಆಂತರಿಕ ಶಕ್ತಿ, ಇಚ್ಛಾಶಕ್ತಿ, ಪ್ರತಿಭೆ, ದೃಢನಿರ್ಧಾರ, ಧೈರ್ಯ ಮತ್ತು ಪರಿಶ್ರಮಕ್ಕೆ ತಕ್ಕ ಫಲವನ್ನು ನೀಡುವಳು.

ಧಾನ್ಯ ಲಕ್ಷ್ಮೀ

ಲಕ್ಷ್ಮಿ ದೇವಿಯ 8 ರೂಪಗಳಲ್ಲಿ ಧಾನ್ಯ ಲಕ್ಷ್ಮಿ ರೂಪ ಕೂಡ ಒಂದು. ಧಾನ್ಯ ಲಕ್ಷ್ಮಿಯು ಕೃಷಿ ಸಂಪತ್ತನ್ನು ಒದಗಿಸುವಲ್ಲಿ ಮತ್ತು ಸಂಪತ್ತನ್ನು ಸಮಾನ ಹಂಚಿಕೆ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುವುದರಿಂದ ಈಕೆಯನ್ನು ಹೆಚ್ಚಾಗಿ ರೈತರು ಪೂಜಿಸುತ್ತಾರೆ. ಆಕೆಗೆ ಕೃತಜ್ಞತೆಯನ್ನು ಸಲ್ಲಿಸುವ ಸಲುವಾಗಿ ಮೊದಲು ಆಕೆಯನ್ನು ಪ್ರಾರ್ಥಿಸುತ್ತಾರೆ. ಈಕೆಯ ಹೆಸರಿನಲ್ಲಿ ಧಾನ್ಯವನ್ನು ದಾನ ಮಾಡುತ್ತಾರೆ. ಸಮೃದ್ಧಿಯ ಸಂಕೇತವಾದ ಹಸಿರು ವಸ್ತ್ರವನ್ನು ತೊಟ್ಟ ಈಕೆ 8 ಕೈಗಳನ್ನು ಹೊಂದಿದ್ದಾಳೆ. ಅದರಲ್ಲಿ ಎರಡು ಕಮಲ, ರಾಜದಂಡ, ಭತ್ತ, ಕಬ್ಬು, ಬಾಳೆ ಗೊನೆ ಹಿಡಿದಿದ್ದು, ಇನ್ನರೆಡು ಕೈಗಳಲ್ಲಿ ಅಭಯ ಮುದ್ರೆ ಮತ್ತು ವರದ ಮುದ್ರೆಯನ್ನು ಹಿಡಿದಿದ್ದಾಳೆ.

ಮಹತ್ವ: ದುಷ್ಟರನ್ನು ನಾಶಮಾಡಿ, ತನ್ನನ್ನು ಪೂಜಿಸುವ ಎಲ್ಲರಿಗೂ ಸಹಾಯ ಹಸ್ತ ಚಾಚುವಾಕೆ ಧಾನ್ಯ ಲಕ್ಷ್ಮಿಯಾಗಿದ್ದಾಳೆ. ಯಾರು ಹಸಿವಿನಿಂದ ಬಳಲುತ್ತಿದ್ದಾರೆಂದು ತಿಳಿದು ಅವರಿಗೆ ಆಹಾರವನ್ನು ಒದಗಿಸುವಾಕೆ ಧಾನ್ಯ ಲಕ್ಷ್ಮಿಯಾಗಿದ್ದಾಳೆ. ಜನರು ತಮ್ಮ ಧಾನ್ಯವನ್ನು ದೀರ್ಘಾವಧಿಯವರೆಗೆ ಹಾಳಾಗದಂತೆ ಇಟ್ಟುಕೊಳ್ಳಲು ಮತ್ತು ಪೋಷಿಸಲು ಧಾನ್ಯ ಲಕ್ಷ್ಮಿಯನ್ನು ಪೂಜಿಸುತ್ತಾರೆ.

​ಗಜ ಲಕ್ಷ್ಮೀ

ಭಗವಾನ್‌ ಇಂದ್ರನು ತನ್ನ ಕಳೆದು ಹೋದ ಸಂಪತ್ತನ್ನು ಸಮುದ್ರದ ಆಳದಿಂದ ಮರಳಿ ಪಡೆಯಲು ಗಜ ಲಕ್ಷ್ಮಿ ಸಹಾಯ ಮಾಡಿದಳೆಂಬ ನಂಬಿಕೆಯಿದೆ. ಅಧಿಕಾರ ಮತ್ತು ರಾಜ ವೈಭವವನ್ನು ನೀಡುವ ಗಜ ಲಕ್ಷ್ಮಿ ತನ್ನ ಭಕ್ತರಿಗೆ ಸಂಪತ್ತನ್ನು, ಹಣವನ್ನು, ಸಮೃದ್ಧಿಯನ್ನು ಶ್ರೀಮಂತಿಕೆಯನ್ನು ನೀಡುವಳು. ಸಮುದ್ರ ಮಂಥನ ಸಮಯದಲ್ಲಿ ಈಕೆ ಆನೆಗಳೊಂದಿಗೆ ಹೊರಹೊಮ್ಮಿದಳು ಎನ್ನುವ ನಂಬಿಕೆಯಿದೆ. ನಾಲ್ಕು ಕೈಗಳಿರುವ ಈಕೆ ಕೆಂಪು ಸೀರೆಯುಟ್ಟು ಕಮಲದ ಮೇಲೆ ಕುಳಿತುಕೊಂಡಿದ್ದಾಳೆ. ಎರಡು ಕೈಗಳಲ್ಲಿ ಕಮಲ, ಇನ್ನೆರಡರಲ್ಲಿ ಅಭಯ ಮುದ್ರೆ ಮತ್ತು ವರದ ಮುದ್ರೆಯನ್ನು ಹೊಂದಿದ್ದಾಳೆ. ಅವಳ ಪಕ್ಕದಲ್ಲಿ ಎರಡು ಆನೆಗಳು ಆಕೆಗೆ ನೀರು ಪ್ರೋಕ್ಷಣೆ ಮಾಡುತ್ತಿರುತ್ತವೆ.

ಮಹತ್ವ: ಗಜ ಲಕ್ಷ್ಮಿಯು ಶ್ರೀಮಂತಿಕೆಯನ್ನು ಸೂಚಿಸುತ್ತಾಳೆ. ಗಜ ಲಕ್ಷ್ಮಿಯ ಅನುಗ್ರಹದಿಂದ ಶ್ರೇಯಸ್ಸು, ಸಂಪತ್ತು, ಸಿರಿವಂತಿಕೆ ದೊರೆಯುವುದು. ಆನೆಗಳು ಲಕ್ಷ್ಮಿ ದೇವಿಯೊಂದಿಗೆ ಬೆಳೆಗಳನ್ನು ಪೋಷಿಸುತ್ತದೆ ಮತ್ತು ಫಲವತ್ತತೆಯನ್ನು ನೀಡುತ್ತದೆ.

​ಸಂತಾನ ಲಕ್ಷ್ಮೀ

ಸಂತಾನವನ್ನು ಕರುಣಿಸುವಾಕೆ ಇವಳು. ಆರೋಗ್ಯವಂತ ಹಾಗೂ ದೀರ್ಘಾಯಸ್ಸುಳ್ಳ ಮಕ್ಕಳನ್ನು ಪಡೆಯಲು ಈಕೆಯನ್ನು ಪೂಜಿಸಲಾಗುತ್ತದೆ. ಆರು ಕೈಗಳನ್ನು ಹೊಂದಿರುವ ಈಕೆ ಕೆಂಪು ಮತ್ತು ಹಳದಿ ಬಣ್ಣದ ಬಟ್ಟೆಯನ್ನು ಧರಿಸಿ ತನ್ನ ಎರಡು ಕೈಗಳಲ್ಲಿ ಕುಂಭಗಳನ್ನು, ಖಡ್ಗ, ಗುರಾಣಿ ಮತ್ತು ಇನ್ನೆರಡು ಕೈಗಳಲ್ಲಿ ಅಭಯ ಮುದ್ರೆಯನ್ನು ಹೊಂದಿದ್ದಾಳೆ. ವಿಶೇಷವಾಗಿ ಈಕೆಯ ಮಡಿಲಲ್ಲಿ ಮಗುವಿದೆ, ಆ ಮಗು ಕಮಲವನ್ನು ಹಿಡಿದಿರುತ್ತದೆ.

ಮಹತ್ವ: ಸಂತಾನ ಲಕ್ಷ್ಮಿಯನ್ನು ಪೂಜಿಸುವುದರಿಂದ ಸಂತಾನವಿಲ್ಲದವರು ಮಕ್ಕಳನ್ನು ಹೊಂದುತ್ತಾರೆ. ಸಂತಾನ ಲಕ್ಷ್ಮಿಯನ್ನು ಹೆಚ್ಚಾಗಿ ದಂಪತಿಗಳು ಪೂಜಿಸುತ್ತಾರೆ. ಈಕೆಯನ್ನು ಪೂಜಿಸುವುದರಿಂದ ಆರೋಗ್ಯಯುತವಾದ ಹಾಗೂ ದೀರ್ಘಾಯಸ್ಸು ಹೊಂದಿರುವ ಮಗುವನ್ನು ಪಡೆಯಬಹುದು.

​ಧೈರ್ಯ ಲಕ್ಷ್ಮೀ

ಧೈರ್ಯ ಲಕ್ಷ್ಮಿಯನ್ನು ವೀರ ಲಕ್ಷ್ಮಿಯೆಂದು ಕೂಡ ಕರೆಯಲಾಗುತ್ತದೆ. ಜೀವನದ ಉನ್ನತ ಗುರಿಯನ್ನು ಸಾಧಿಸಲು ಈಕೆ ಸಹಕರಿಸುತ್ತಾಳೆ. ಧೈರ್ಯವನ್ನು ಪಡೆಯಲು ಈಕೆಯನ್ನು ಪೂಜಿಸಲಾಗುತ್ತದೆ. ಹೆಸರೇ ಸೂಚಿಸುವಂತೆ ಈಕೆ ಧೈರ್ಯವನ್ನು, ಶಕ್ತಿಯನ್ನು ನೀಡುವವಳು. ಎಂಟು ಕರಗಳನ್ನು ಹೊಂದಿರುವ ಈಕೆ ಕೆಂಪು ಬಣ್ಣದ ಸೀರೆಯುಟ್ಟಿರುತ್ತಾಳೆ. ಕೈಯಲ್ಲಿ ಚಕ್ರ, ಶಂಖ, ಬಾಣ, ಖಡ್ಗ, ಚಿನ್ನದ ಬಿಲ್ಲೆ ಕೆಲವೊಮ್ಮೆ ಪುಸ್ತಕ ಮತ್ತು ಇನ್ನೆರಡು ಕೈಯಲ್ಲಿ ಅಭಯ ಮತ್ತು ವರದ ಮುದ್ರೆಯನ್ನು ಹೊಂದಿದ್ದಾಳೆ .

ಮಹತ್ವ: ವೀರ ಲಕ್ಷ್ಮಿಯನ್ನು ಪೂಜಿಸುವುದರಿಂದ ಹೊಸ ಗುರಿಯನ್ನು ಸಾಧಿಸಬಹುದು. ಜೀವನದಲ್ಲಿ ಧೈರ್ಯವನ್ನು ಪಡೆಯಲು ಧೈರ್ಯ ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ನಮ್ಮ ಕಾರ್ಯಕ್ಷಮತೆಯ ಬಗ್ಗೆ ಮನಸ್ಸಿನಲ್ಲಿರುವ ಅಸ್ಪಷ್ಟತೆಯನ್ನು ತೆಗೆದು ಹಾಕುತ್ತಾಳೆ. ಅನಿಶ್ಚಿತತೆ, ನಂಬಿಕೆಯ ಕೊರತೆ ಮತ್ತು ಅನುಮಾನವನ್ನು ಈಕೆ ದೂರಾಗಿಸುವಳು.

ವಿಜಯ ಲಕ್ಷ್ಮೀ

ವಿಜಯವನ್ನು ನೀಡುವ ಈಕೆಯನ್ನು ವಿಜಯ ಲಕ್ಷ್ಮಿ ಎಂದೂ ಕರೆಯಲಾಗುತ್ತದೆ. ಕೆಂಪು ಸಾರಿಯುಟ್ಟು, 8 ಕೈಗಳನ್ನು ಹೊಂದಿರುವ ಈಕೆ ಕಮಲದಲ್ಲಿ ಆಸೀನಳಾಗಿರುತ್ತಾಳೆ. ಕೈಯಲ್ಲಿ ಚಕ್ರ , ಶಂಖ, ಗುರಾಣಿ, ಕುಣಿಕೆ, ಕಮಲ ಹಾಗು ಇನ್ನೆರಡು ಕೈಗಳಲ್ಲಿ ಅಭಯ ಮತ್ತು ವರದ ಮುದ್ರೆಯನ್ನು ಹೊಂದಿರುತ್ತಾಳೆ. ಈ ಅವತಾರವು ಯುದ್ಧಭೂಮಿಯಲ್ಲಿ ಮಾತ್ರವಲ್ಲದೆ ಜೀವನದ ಕ್ಷೇತ್ರದಲ್ಲೂ ವಿಜಯವನ್ನು ಸೂಚಿಸುತ್ತದೆ. ಜೀವನದಲ್ಲಿನ ಎಲ್ಲಾ ಅಡೆತಡೆಗಳನ್ನು ನಿವಾರಿಸಲು ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ಲಕ್ಷ್ಮಿ ಈ ರೂಪವನ್ನು ಪಡೆದುಕೊಂಡಿದ್ದಾಳೆ.

ಮಹತ್ವ: ಲಕ್ಷ್ಮಿಯ ಈ ಅವತಾರವನ್ನು ಪೂಜಿಸುವುದರಿಂದ ಆಂತರಿಕ ಶಕ್ತಿ ಮತ್ತು ಗೆಲುವಿನ ಮನೋಭಾವವನ್ನು ಬೆಳೆಸಿಕೊಳ್ಳಬಹುದು. ಯಶಸ್ಸನ್ನು ಸಾಧಿಸುವಲ್ಲಿ ಇದು ಒಂದು ಪ್ರಮುಖ ಭಾಗವಾಗಿದೆ. ವಿಜಯ ಲಕ್ಷ್ಮಿ ಎಂಬುದು ಪ್ರಬುದ್ಧತೆಯ ಸ್ವರೂಪವಾಗಿದ್ದು, ಜೀವನವನ್ನು ಸ್ಪಷ್ಟವಾಗಿ ಮತ್ತು ಸಕಾರಾತ್ಮಕ ದೃಷ್ಟಿಕೋನದಿಂದ ಅರ್ಥೈಸಿಕೊಳ್ಳಲು ಸಹಕಾರಿಯಾಗಿದೆ. ವಿಜಯ ಲಕ್ಷ್ಮಿ ದೇವಿಯು ತನ್ನ ಭಕ್ತರಿಗೆ ಜೀವನದ ಎಲ್ಲಾ ಪ್ರಯತ್ನಗಳಲ್ಲಿ ಯಶಸ್ಸನ್ನು ಆಶೀರ್ವದಿಸುತ್ತಾಳೆ. ಅವರು ಕೈಗೊಳ್ಳುವ ಯಾವುದೇ ಕಾರ್ಯಗಳಲ್ಲಿ ವಿಜಯವನ್ನು ತರುತ್ತಾಳೆ. ಮತ್ತು ಶಾಂತಿ ಮತ್ತು ಸಮೃದ್ಧಿಯಿಂದ ತುಂಬಿದ ಜೀವನವನ್ನು ನಡೆಸಲು ಮಾರ್ಗದರ್ಶನ ನೀಡುತ್ತಾಳೆ.

​ವಿದ್ಯಾ ಲಕ್ಷ್ಮೀ

ವಿದ್ಯೆಯ ಅಧಿ ದೇವತೆ ಈಕೆ. ಕಮಲದಲ್ಲಿ ಆಸೀನಳಾಗಿರುವ ವಿದ್ಯಾ ಲಕ್ಷ್ಮಿ ಅಥವಾ ಐಶ್ವರ್ಯ ಲಕ್ಷ್ಮೀ ಬಿಳಿ ಬಣ್ಣದ ಸೀರೆಯುಟ್ಟು ಎರಡು ಕೈಗಳಲ್ಲಿ ಕಮಲ ಹಾಗೂ ಇನ್ನೆರಡು ಕೈಯಲ್ಲಿ ಅಭಯ ಮತ್ತು ವರದ ಮುದ್ರೆಯನ್ನು ಹಿಡಿದಿದ್ದಾಳೆ. ಜ್ಞಾನದ ದೇವತೆಯಾದ ವಿದ್ಯಾ ಲಕ್ಷ್ಮಿಯನ್ನು ಐಶ್ವರ್ಯ ದೇವತೆಯೆಂದೂ ಕೂಡ ಕರೆಯಲಾಗುತ್ತದೆ.

ಮಹತ್ವ: ವಿದ್ಯಾ ಲಕ್ಷ್ಮಿಯನ್ನು ಪೂಜಿಸುವ ಮೂಲಕ ಒಬ್ಬರು ತಮ್ಮ ದುಃಖಗಳನ್ನು ಮತ್ತು ತೊಂದರೆಗಳನ್ನು ನಿವಾರಿಸಿಕೊಳ್ಳುವರು. ಪರೀಕ್ಷೆಯಲ್ಲಿ ಉತ್ತಮ ಅಂಕವನ್ನು ಪಡೆಯಲು, ಪರೀಕ್ಷೆಯಲ್ಲಿ ಯಶಸ್ಸನ್ನು ಸಾಧಿಸಲು ವಿದ್ಯಾರ್ಥಿಗಳು ಲಕ್ಷ್ಮಿ ದೇವಿಯ ಈ ಅವತಾರವನ್ನು ಬುಧವಾರದಂದು ಪೂಜಿಸಬೇಕು.

- ಸಂಗ್ರಹ ಲೇಖನ , ನಮ್ಮ ಓದುಗರು ನೀಡಿದ ಲೇಖನ

–>