-->

Significance of Holi festival , interesting beliefs and practices

ಹೋಳಿ ಹಬ್ಬದ ಆಚರಣೆ ಮಹತ್ವ ಏನು ಗೊತ್ತಾ..? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಬೇಸಿಗೆಯ ಸಮಯ ರೈತರೆಲ್ಲ ತನ್ನ ಹೊಲಗದ್ದೆಗಳ ಕಾರ್ಯಗಳನ್ನು ಮುಗಿಸಿ ಮನೆಯಲ್ಲಿ ನಿರಾಳವಾಗಿ ಕಾಲ ಕಳೆಯುವ ಸಮಯ.

ಗಿಡ-ಮರಗಳಲ್ಲಿ ಹಸಿರು ಸಿರಿ ಚಿಮ್ಮುವ ಸಂಭ್ರಮ.ಇಂಥ ಸಂಭ್ರಮದಲ್ಲಿ ಗಂಡಸರಿಗೆ ಬರುವ ಹಬ್ಬ ಹೋಳಿ.ಕಾಮವು ಕ್ಷಣಿಕ ಪ್ರೇಮವು ಶಾಶ್ವತ,ಕಾಮವು ದೈಹಿಕ,ಪ್ರೇಮವು ಮಾನಸಿಕ.ನಮ್ಮ ಅಂತರಂಗ ಬಹಿರಂಗ ಶುದ್ಧಿಯಿಂದ ಕಾಮವನ್ನು ನಿಗ್ರಹಿಸಿ ಪ್ರೇಮವನ್ನು ಸಾಕ್ಷಾತ್ಕರಿಸಿಕೊಳ್ಳುವ ಮೂಲಕ ಬದುಕನ್ನು ಕಂಡುಕೊಳ್ಳುವ ಪರಿಯೇ ಕಾಮ ದಹನದ ಹೋಳಿಹಬ್ಬ.

ಇದನ್ನು ವಸಂತೋತ್ಸವ,ರಂಗಪಂಚಮಿ,ಫಗ್ವಾ,ಡೋಲ್ ಯಾತ್ರಾ ಎಂಬ ಹೆಸರುಗಳಿಂದ ದೇಶದೆಲ್ಲೆಡೆ ಆಚರಿಸುತ್ತಾರೆ.ಇತಿಹಾಸ ಕಾಲದಲ್ಲಿಯೂ ಹೋಳಿ ಹಬ್ಬ ಆಚರಣೆಯ ಬಗ್ಗೆ ಐತಿಹ್ಯಗಳು ದೊರೆತಿವೆ.

ವಿಜಯನಗರದ ಅರಸರ ಕಾಲದಲ್ಲಿ ಹಾಗೂ ಅಹಮದ್‍ನಗರ,ಮೇವಾರ ಮತ್ತು ಬುಂಡಿಯಲ್ಲಿರುವ ಚಿತ್ರಕಲೆಯಲ್ಲಿ ಈ ಹಬ್ಬ ಆಚರಣೆ ಕುರಿತ ಕುರುಹುಗಳು ದೊರೆತಿವೆ.

ಭಾಗವತ ಪುರಾಣ ಮತ್ತು ವಿಷ್ಣು ಪುರಾಣದಲ್ಲಿಯೂ ಈ ಕುರಿತ ಮಾಹಿತಿ ಉಲ್ಲೇಖವಿದೆ.

ಪಾಲ್ಗುಣ ಹುಣ್ಣಿಮೆಯ ವೇಳೆಗೆ ಗಿಡಮರಗಳು ಚಿಗುರಿ ಹೂಗೊಂಚಲು ಮೂಡಿ ಹಸಿರಿನಿಂದ ಕಂಗೊಳಿಸುತ್ತಿರುತ್ತವೆ.ಇದು ವಸಂತನನ್ನು ಸ್ವಾಗತಿಸುವ ಮುನ್ಸೂಚನೆ ಕೂಡ.ಈ ಸಮಯ ರಾಜ ಮಹರಾಜರು ಕೌಮುದಿ ಮಹೋತ್ಸವ ಆಚರಿಸುತ್ತಿದ್ದರು.ಇದು ಶೃಂಗಾರ ರಸಕ್ಕೆ ಪೂರಕ ಕೂಡ.ಆಗ ಸಂಗೀತ ಮತ್ತು ನೃತ್ಯ ನಾಟಕಾಭಿನಯ ರಾಜ ಅರಮನೆಯಲ್ಲಿ ಏರ್ಪಾಟಾಗುತ್ತಿದ್ದವು.ಇದು ಸಾಮೂಹಿಕ ಉತ್ಸವ ರೂಪವನ್ನು ಪಡೆದಿದ್ದಿತು ಎಂಬುದನ್ನು ಇತಿಹಾಸದಿಂದ ತಿಳಿಯಬಹುದು.

ಹೋಳಿ ಹಬ್ಬ ಕುರಿತಂತೆ ಎರಡು ದೃಷ್ಟಾಂತಗಳು ಬಳಕೆಯಲ್ಲಿವೆ. ಶಿವರಾತ್ರಿ ಅಮವಾಸೆಯಿಂದ ಹೋಳಿ ಹುಣ್ಣಿಮೆಗೆ ಹದಿನೈದರಿಂದ ಇಪ್ಪತ್ತು ದಿನಗಳ ಅಂತರ.

ಪರಮಾತ್ಮನು ತುಂಗಭದ್ರಾ ನದಿಯ ದಡದಲ್ಲಿ ಇರುವ ಹೇಮಗಿರಿ ಪರ್ವತದ ಶಿಖರದಲ್ಲಿ ತಪಸ್ಸು ಮಾಡುವಾಗ ಅವನ ತಪಸ್ಸನ್ನು ಭಂಗ ಮಾಡಿ ಮದುವೆಯಾಗಲು ಪಾರ್ವತಿಯು ಕಾಮದೇವನಲ್ಲಿ ಮೊರೆ ಹೋಗುತ್ತಾಳೆ.

ಆಗ ವಿಷ್ಣುವಿನ ಅಪ್ಪಣೆಯಂತೆ ಕಾಮದೇವನು ತನ್ನ ಸೈನ್ಯ ಸಮೇತ ಶಿವನಿದ್ದ ಸ್ಥಳಕ್ಕೆ ಬಂದು ತನ್ನ ಬಾಣಗಳಿಂದ ತಫೋಭಂಗಗೊಳಿಸುತ್ತಾನೆ ಇದರಿಂದ ಕೋಪೆಗೊಂಡ ಶಿವನು ತನ್ನ ಉರಿಗಣ್ಣಿನಿಂದ ಕಾಮನನ್ನು ಸುಟ್ಟು ಭಸ್ಮ ಮಾಡುತ್ತಾನೆ.

ಗಂಡನನ್ನು ಕಳೆದುಕೊಂಡ ರತಿಯನ್ನು ಸಮಾಧಾನಪಡಿಸುವುದು ಪಾರ್ವತಿಗೆ ಕಷ್ಟವಾಗುತ್ತದೆ. ಆಗ ಪಾರ್ವತಿಯು ಕೂಡ ಘೋರ ತಪಸ್ಸನ್ನಾಚರಿಸಿ ಪರಶಿವನನ್ನು ಒಲಿಸಿಕೊಂಡಳಲ್ಲದೇ ಕಾಮನಿಗೆ ಮರುಜನ್ಮ ಕೊಡಿಸುವಳು.ತನ್ನಿಮಿತ್ತ ಹೋಳಿ ಆಚರಣೆ ಬಂದಿದೆ ಎಂಬುದು ಪ್ರತೀತಿ.

ಹಿರಣ್ಯಕಶ್ಯಪನ ತಂಗಿ ಹೋಲಿಕಾ ತನಗೆ ಬೆಂಕಿಯಿಂದ ಮರಣ ಬರಬಾರದೆಂದು ವರ ಪಡೆದಿದ್ದಳು.ಇದನ್ನು ಹಿರಣ್ಯಕಶಿಪು ತನ್ನ ಮಗ ಪ್ರಹ್ಲಾದನನ್ನು ಪರಿವರ್ತಿಸಲು ಎಲ್ಲ ಪ್ರಯತ್ನಗಳನ್ನು ಮಾಡಿ ಸೋತಾಗ ತನ್ನ ತಂಗಿಯ ತೊಡೆಯ ಮೇಲೆ ಕುಳ್ಳಿರಿಸಿ ಸುತ್ತಲೂ ಅಗ್ನಿಯನ್ನು ಉರಿಸಲು ಆ ಅಗ್ನಿಯಲ್ಲಿ ಹೋಲಿಕಾ ತನ್ನ ರಾಕ್ಷಸೀ ಪ್ರವೃತ್ತಿಯಿಂದ ಆಹುತಿಯಾಗುತ್ತಾಳೆ., ತನ್ನ ಭಕ್ತಿಯಿಂದ ಪ್ರಹ್ಲಾದ ಭಗವಂತನಿಂದ ರಕ್ಷಿಸಲ್ಪಡುವನು. ಅವಳ ನೆನಪಿಗೆ ಹೋಲಿ ಹಬ್ಬ ಆಚರಣೆ ಬಂತೆಂದು ಹೇಳುವರು.

ಇಂದು ಕಾಮನ ಪ್ರತಿಷ್ಟಾಪನೆ ಗ್ರಾಮೀಣ ಪ್ರದೇಶದಲ್ಲಿ ಬಹಳ ವಿಜೃಂಭಣೆಯಿಂದ ಜರುಗುತ್ತದೆ. ಊರಿನ ಪ್ರತಿ ಓಣಿ(ಗಲ್ಲಿಗಳಲ್ಲಿ)ಗಳಲ್ಲಿ ಒಂದೊಂದು ನಿಗದಿತ ಸ್ಥಳದಲ್ಲಿ ಕಾಮನ ಕಟ್ಟೆಯೆಂಬ ಸ್ಥಳದಲ್ಲಿ ರತಿಮನ್ಮಥರ ಮೂರ್ತಿಗಳನ್ನು ಪ್ರತಿಷ್ಟಾಪನೆ ಮಾಡುವರು.ಈ ಸಂದರ್ಭ ವಯಸ್ಸಿನ ಬೇಧವಿಲ್ಲದೇ ಹಲಗೆ ಬಾರಿಸುತ್ತ

"ಕಾಮಣ್ಣನ ಕಟ್ಟುವ ಕರಿಬಿದರ ಸವರುತ್ತ,ಕಾಮಣ್ಣಗ ಬಾಸಿಂಗ ಕಟ್ಟುವ ನಮ್ಮ ಕಾಮ ಇನ್ನೆರಡ ದಿವಸ ಇರಲಿಲ್ಲೋ." ಎಂದು ಲಬೋ ಲಬೋ ಲಬೋ ಎಂದು ಹೊಯ್ಯುಕೊಳ್ಳುವ ಈ ಆಚರಣೆ ನಿಜಕ್ಕೂ ವಿಶಿಷ್ಟವಾದುದು.

ಇಲ್ಲಿ ಅಶ್ಲೀಲತೆಯಂಥಹ ಪದಗಳು ಬಳಕೆಯಾದರೂ ಕೂಡ ಕಾಮ ಮತ್ತು ರತಿಯರ ಸ್ವಭಾವ ಗುಣಗಳನ್ನು ಹೊಗಳುತ್ತ ಗಂಡು-ಹೆಣ್ಣು ವೇಷ ಧರಿಸಿ ಸವಾಲ್-ಜವಾಬ್ ರೀತಿ ಪದಗಳನ್ನು ಹೇಳುತ್ತ ಖುಷಿಯಿಂದ ಗಂಡಸರು ಆಚರಿಸುವ ಈ ಹೋಳಿ ಕಾಮನನ್ನು ಕೂಡ್ರಿಸಿ ಮನೆಯಲ್ಲಿ ಸಿಹಿ ಅಡುಗೆ ಮಾಡಿ ನೈವೇದ್ಯೆ ಮಾಡಿ ಮರುದಿನ ಕಟ್ಟಿಗೆಯ ಮೇಲೆ ಕಾಮನನ್ನು ಕುಳ್ಳಿರಿಸಿ ದಹನ ಮಾಡುವ ಮೂಲಕ ಹಬ್ಬ ಆಚರಣೆ ವಿಶಿಷ್ಟವಾದುದು.

ಇಂಥ ಸಂದರ್ಭ ಕಾಮನನ್ನು ಸುಟ್ಟ ಬೆಂಕಿಯ ಕೆಂಡವನ್ನು ಕೆಲವು ಜನ ತಮ್ಮ ಮನೆಗೆ ತರುತ್ತಾರೆ. ಕಾರಣವಿಷ್ಟೇ ಆ ಕೆಂಡದಿಂದ ಮನೆಯ ಒಲೆಯನ್ನು ಹೊತ್ತಿಸಿದರೆ ವರ್ಷದುದ್ದಕ್ಕೂ ಅವರ ಮನೆ ಅಡುಗೆ ಹುಲುಸಾಗುತ್ತದೆ ಎಂಬ ನಂಬಿಕೆ.ಅಷ್ಟೇ ಅಲ್ಲ ಆ ದಿನ ಹೋಳಿಗೆ ಮಾಡುತ್ತಾರೆ ಅದನ್ನು ಹೆಂಗಸರು ಹೇಳುವ ರೀತಿ ಹೀಗಿದೆ " ಹೊಯ್ಕೊಂಡ ಬಾಯಿಗೆ ಹೋಳಿಗೆ-ತುಪ್ಪ" ಎಂದು ಚೇಷ್ಟೆ ಮಾಡಿ ಉಣಬಡಿಸುವರು.

ಇನ್ನೂ ಕೆಲವರು ಈ ಕಾಮನ ಬೆಂಕಿಯಲ್ಲಿ ಕಡಲೆ ಹುರಿದುಕೊಳ್ಳುವರು. ಈ ಕಡಲೆ ತಿಂದರೆ ಬಾಯಿಯಲ್ಲಿನ ಹಲ್ಲುಗಳು ಗಟ್ಟಿಯಾಗುತ್ತವೆ ಎಂಬ ನಂಬಿಕೆ. ಕಾಮನ ಬೂದಿಯನ್ನು ಮನೆಗೆ ಒಯ್ದು ಆ ವರ್ಷದ ಮೊದಲ ಮಳೆಯ ನಂತರ ಬಿತ್ತುವ ಬೀಜದಲ್ಲಿ ಆ ಬೂದಿಯನ್ನು ಬೆರೆಸಿ ಬಿತ್ತನೆ ಮಾಡಿದರೆ ಬೆಳೆ ಚನ್ನಾಗಿ ಬರುತ್ತದೆ ಎಂಬ ಪ್ರತೀತಿ ಇದೆ.

ಕಾಮದಹನ ಸಂದರ್ಭ ತೆಂಗಿನ ಕಾಯಿಯನ್ನು ಕಾಮನ ತಲೆಯನ್ನು ಗುರಿಯಾಗಿಸಿಕೊಂಡು ಎಸೆಯುವರು. ಆಗ ಅವನ ರುಂಡವು ಯಾವ ದಿಕ್ಕಿನತ್ತ ಬೀಳುತ್ತದೆಯೋ ಆ ದಿಕ್ಕಿನಲ್ಲಿ ಮಳೆ-ಬೆಳೆ ಬಹಳ ಆಗುತ್ತದೆ ಎನ್ನುವುದು ವಾಡಿಕೆ.ಕಾಮ ಸತ್ತ ಐದು ದಿನಕ್ಕೆ ಮಳೆಯಾಗುತ್ತದೆ. ಅದು ಕಾಮಣ್ಣನ ಬೂದಿ ತೋಯಿಸುತ್ತದೆ.ಅದು ಕಾಮನ ಕಣ್ಣೀರು ಎಂಬುದು ಗ್ರಾಮೀಣ ಜನರ ನಂಬಿಕೆ.

ಕಾಮನನ್ನು ಸುಟ್ಟು ಅವನ ಬೂದಿಯನ್ನು ವಿಭೂತಿಯಂತೆ ಹಣೆಗೆ ಧರಿಸುವುದು ಕೂಡ ಮನದ ಕೆಟ್ಟ ಕಾಮವನ್ನು ಜ್ಞಾನ ಚಕ್ಷುವಿನಿಂದ ಸುಟ್ಟು ಬೊಟ್ಟಿಡುವುದು ಶಿವನ ಸಾಕ್ಷಾತ್ಕಾರದ ಸಾಧನ.

ನಮ್ಮ ಆಸೆ ಆಕಾಂಕ್ಷೆಗಳಲ್ಲಿ ಧರ್ಮಸೂಕ್ಷ್ಮ ದರ್ಶನಕಾಣ್ಕೆಯಿದ್ದು ಅಂತರಂಗ ಮತ್ತು ಬಹಿರಂಗ ಶುದ್ಧಿಯಿಂದ ಶರೀರ ಪವಿತ್ರತೆಯನ್ನು ಪಡೆಯಬೇಕು.ಇದು ವಿಭೂತಿ ಧಾರಣೆಯ ಮೂಲಕ ಆಗಬೇಕು.

ಅದು ಕಾಮ ದಹನದ ಮೂಲಕ.ಶಿವನ ಹಣೆ ಎಂದರೆ ಜ್ಞಾನ ಚಕ್ಷು.ಕಾಮ ಎಂದರೆ ಕೆಟ್ಟ ಆಸೆ.ಕೆಟ್ಟ ಆಸೆಯನ್ನು ಜ್ಞಾನ ಚಕ್ಷುವಿನ ಸೂರ್ಯನಿಂದ ಸುಟ್ಟು ಉತ್ತಮ ಸಂಸ್ಕಾರ ಹೊಂದುವುದಾಗಿದೆ.

ಕೇವಲ ಯೌವನ ಭರಿತ ದೇಹ ಕಾಮಾತುರಣದಿಂದ ತನ್ನ ಸ್ಥಿತಿಯನ್ನು ಪಡೆದರೆ ಅದು ಪ್ರೇಮವಾಗದು.ಭಾವನಾಪರವಶತೆಯಿಂದ ಆತ್ಮಶ್ರೀಯಿಂದ ಎರಡೂ ಕಡೆ ಸಮತೋಲಿತ ಪ್ರೇಮ ಒಡಮೂಡಿದಾಗ ಮಾತ್ರ ಅದು ತಪಸ್ಸಿನಂತೆ ಕಂಗೊಳಿಸುವುದು.

ಇಲ್ಲಿ ಕೇವಲ ಕಾಮವಿರದೆ ಪ್ರೇಮತ್ವ ಮೂಡಿರುವುದು.ಇದು ಪಾರ್ವತಿ ಕಾಮನ ಸಹಾಯ ಪಡೆದು ಶಿವನ ಮೋಹಿಸುವ ಪರಿಯನ್ನು ಶಿವ ತನ್ನ ಇಚ್ದೆಯ ವಿರುದ್ಧ ಪ್ರಕ್ರಿಯೆಯೆಂದು ಪರಿಗಣಿಸಿ ಕಾಮನನ್ನು ಸುಡುವ ಮೂಲಕ ಪಾರ್ವತಿ ತನ್ನ ತಪಸ್ಸಿನ ಮೂಲಕ ಶಿವನೊಲುಮೆ ಪಡೆಯುವಂತೆ ಮಾಡುವುದಿದೆಯಲ್ಲ ಅಲ್ಲಿ ನಿಷ್ಕಾಮ ಪ್ರೇಮ ಮೂಡುವ ಭಾವನೆ ಆತ್ಮಶ್ರೀಯ ಮೂಲಕ ನಡೆಯುವುದು.

Significance of Holi festival , interesting beliefs and practices


ಶಿವನನ್ನು ಸಾಕ್ಷಾತ್ಕರಿಸಿಕೊಳ್ಳಲು ನಮ್ಮ ಪ್ರಣಯದ ಆಸೆ ಆಕಾಂಕ್ಷೆಗಳನ್ನು ಮೊದಲು ಸುಡಬೇಕು.ಕಾಮವು ಪ್ರೇಮವಾಗಿ ಶಿವರತಿಯಾಗಬೇಕು.  ಬಹಿರಂಗ ಶುದ್ದೀಕರಣವಾಗಬೇಕು.

ಮಾರ ಎಂದೂ ಕರೆಯಲ್ಪಡುವ ಕಾಮದೇವನು ಮಾನವ ಪ್ರೇಮ ಹಾಗೂ ಬಯಕೆಯ ಹಿಂದೂ ದೇವತೆ. ಮನ್ಮಥ, ಅತನು,ಮದನ, ರತಿಕಾಂತ, ಕುಸುಮಶರ ಅಥವಾ ಕಾಮ ಅವನ ಇತರ ಹೆಸರುಗಳು. ಕಾಮದೇವನು ಹಿಂದೂ ದೇವತೆ ಶ್ರೀಯ ಮಗ ಮತ್ತು ಜೊತೆಗೆ ಕೃಷ್ಣನ ಮಗನಾದ ಪ್ರದ್ಯುಮ್ನನು ಕಾಮದೇವನ ಅವತಾರನೆಂದು ಪರಿಗಣಿಸಲಾಗುತ್ತದೆ.
 
ಬಣ್ಣಗಳ ಹಬ್ಬ ಹೋಳಿ ಹಬ್ಬ. ಉಲ್ಲಾಸ ತುರುವ ಬಣ್ಣಗಳ ಎರಚಾಟದ ಮನೋರಂಜನೆಯ ನಂತರ ಸ್ನಾನ ಮಾಡಿ ದೇವರ ಪೂಜೆ ನೆರವೇರಿಸುವುದು ಹೋಳಿ ಹಬ್ಬದ ವಿಶೇಷ. ವಿವಿಧ ಬಣ್ಣಗಳ ಓಕುಳಿ ಹರಿಸಿ ಇಡಿ ವರ್ಷ ಸಂತೋಷದ ಕೋಡಿಯೇ ಹರಿಯಲಿ ಎಂದು ಹಾರೈಸುವ ರಂಗಿನ ಹಬ್ಬ ಇದು.

ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ಮಾತ್ರ ಆಚರಣೆಯಲ್ಲಿದ್ದ ಹೋಳಿ ಹಬ್ಬವನ್ನು ಈಗ ಭಾರತದಾದ್ಯಂತ ಆಚರಿಸಲಾಗುತ್ತಿದೆ. ಯುವಕ ಯುವತಿಯರಿಗೆಲ್ಲ ಮೋಜು ತರುವ ಹರ್ಷದ ಹಬ್ಬ ಇದಾಗಿರುವುದರಿಂದ ಸುಲಭವಾಗಿ ಈ ಹಬ್ಬ ದೇಶದೆಲ್ಲಡೆ ಪಸರಿಸಿದೆ. ಬಣ್ಣಗಳೊಂದಿಗೆ ಓಕುಳಿ ಆಡಿ, ಪರಸ್ಪರ ಬಣ್ಣಗಳನ್ನು ಎರಚಿಕೊಂಡು ಖುಷಿಪಟ್ಟು ಈ ಹಬ್ಬವನ್ನಾಚರಿಸಲಾಗುತ್ತದೆ.

ಪಾಲ್ಗುಣ ಮಾಸದ ಶುಕ್ಲ ಪಕ್ಷದ ಪೂರ್ಣಿಮೆಯ ದಿವಸ ಹೋಳಿಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬಕ್ಕೆ ಕಾಮನ ಹಬ್ಬವೆಂದೂ ಕರೆಯಲಾಗುತ್ತದೆ.
 
ಹರ್ಷ ತರುವ ಬಣ್ಣಗಳ ಹಬ್ಬ..
ಕಾಮನ ಹಬ್ಬವೆಂದೂ ಕರೆಯಲ್ಪಡುವ ಹೋಳಿ ಆಚರಣೆಯ ಹಿಂದೆ ಒಂದು ಕಥೆಯಿದೆ. ತಾರಕಾಸುರನೆಂಬ ರಾಕ್ಷಸನು ತಪಸ್ಸುಮಾಡಿ ಬ್ರಹ್ಮನನ್ನು ಒಲಿಸಿಕೊಂಡು ತನಗೆ ಸಾವು ಬಾರದಂತೆ ಅನುಗೃಹಿಸು ಎಂದು ಬೇಡುತ್ತಾನೆ. ಅದಕ್ಕೆ ಬ್ರಹ್ಮ ಸಾವು ಎಲ್ಲರಿಗೂ ನಿಶ್ಚಿತ ಸಾವು ಬಾರದಂತೆ ತಡೆಯಲು ಸಾಧ್ಯವಿಲ್ಲ ಎನ್ನುತ್ತಾನೆ. ಆಗ ತಾರಕಾಸುರನು, ಶಿವನಿಗೆ ಏಳು ದಿನದಲ್ಲಿ ಜನಿಸಿದ ಮಗನಿಂದ ನನಗೆ ಸಾವು ಬರುವಂತೆ ಮಾಡು ಎಂದು ವರ ಬೇಡುತ್ತಾನೆ. ಅದಕ್ಕೆ ಬ್ರಹ್ಮ ಒಪ್ಪಿ ವರ ನೀಡುತ್ತಾನೆ. ಬ್ರಹ್ಮನಿಂದ ವರ ಪಡೆದಿರುವ ತಾರಕಾಸುರ ಅಹಂಕಾರದಿಂದ ಲೋಕದೆಲ್ಲಡೆ ಉಪಟಳ ನೀಡುತ್ತಿರುತ್ತಾನೆ.

ಆಗ ದೇವತೆಗಳೆಲ್ಲ ಸಹಾಯ ಕೋರಿ ಶಿವನಲ್ಲಿಗೆ ಹೋದಾಗ ಶಿವ ಭೋಗಸಮಾಧಿಯಲ್ಲಿರುತ್ತಾನೆ. ಶಿವ ಭೋಗಸಮಾಧಿಯಿಂದ ಎದ್ದು ಪಾರ್ವತಿಯಲ್ಲಿ ಮೋಹಗೊಂಡು ಸೇರುವಂತೆ ಮಾಡುವುದಕ್ಕಾಗಿ ದೇವತೆಗಳೆಲ್ಲ ಸೇರಿ ರತಿ ಮನ್ಮಥರನ್ನು ಒಪ್ಪಿಸುತ್ತಾರೆ. ಪುಣ್ಯಕಾರ್ಯ ಮಾಡಲು ರತಿ ಮನ್ಮಥರು ಒಪ್ಪುತ್ತಾರೆ. ಅದರಂತೆ ಧ್ಯಾನಸ್ಥ ಸ್ಥಿತಿಯಲ್ಲಿದ್ದ ಮಹಾದೇವನ ಎದುರು ನೃತ್ಯ ಮಾಡಿ, ಹೂವಿನ ಬಾಣ ಬಿಟ್ಟು ಶಿವನ ಧ್ಯಾನಕ್ಕೆ ಭಂಗ ತರುತ್ತಾರೆ. ಇದರಿಂದ ಕುಪಿತಗೊಂಡ ಶಿವ ತನ್ನ ಮೂರನೇ ಕಣ್ಣಿನಿಂದ ಮನ್ಮಥನನ್ನು ಸುಟ್ಟುಬಿಡುತ್ತಾನೆ. ನಂತರ ರತಿ ಪತಿಭಿಕ್ಷೆ ಬೇಡಿದಾಗ ಅವಳಿಗೆ ಮಾತ್ರ ಮನ್ಮಥ ಕಾಣುವಂತೆ ವರ ನೀಡುತ್ತಾನೆ.

ರಂಗಿನಾಟದ ಮೋಜು ಮಸ್ತಿ..
ಮನ್ಮಥನಿಗೆ ಕಾಮ ಎಂಬ ಹೆಸರಿದೆ. ಹೀಗಾಗಿ ಕಾಮ ಶಿವನ ಕೆಂಗಣ್ಣಿಗೆ ಗುರಿಯಾಗಿ ಸುಟ್ಟುಹೋದ ದಿನವನ್ನು ಕಾಮನ ಹಬ್ಬವಾಗಿ ಆಚರಿಸುತ್ತಾರೆ. ಹೀಗಾಗಿ ಕಾಮನನ್ನು ಸುಟ್ಟು ಹೋಳಿಹುಣ್ಣಿಮೆ ಆಚರಿಸುವ ಪದ್ಧತಿ ಆಚರಣೆಯಲ್ಲಿ ಬಂದಿದೆ.

ಹೋಳಿ ಹಬ್ಬಕ್ಕಾಗಿ ಅಕ್ಕಿಹಿಟ್ಟು ಮತ್ತು ಅರಿಶಿನ ಬೆರೆಸಿ ಗುಲಾಲು ತಯಾರಿಸಿಕೊಂಡು ಓಕುಳಿಯಾಡುವ ಸಂಪ್ರದಾಯವಿದೆ. ಈಗೀಗ ಕೃತಕ ಬಣ್ಣಗಳನ್ನು ಎರಚಾಟಕ್ಕೆ ಹೆಚ್ಚಾಗಿ ಬಳಸಲಾಗುತ್ತದೆ. ಉತ್ತರ ಪ್ರದೇಶದಲ್ಲಿ ವಿಜ್ರಂಭಣೆಯಿಂದ ಆಚರಿಸಲ್ಪಡುವ ಹೋಳಿಯಲ್ಲಿ ವಿಶೇಷ ಖಾದ್ಯಗಳನ್ನೂ ಮಾಡಲಾಗುತ್ತದೆ. ಜೋಳದ ಹಿಟ್ಟಿನ ಗುಜಿಯಾ ಹಾಗೂ ಪಾಪ್ಡಿ ಹೋಳಿಹಬ್ಬದ ವಿಶೇಷ ತಿಂಡಿಗಳು.

ನಮ್ಮ ರಾಜ್ಯದಲ್ಲಿಯೂ ದಕ್ಷಿಣ ಕರ್ನಾಟಕದಲ್ಲಿಯೂ ಹಲವೆಡೆ ಹೋಳಿಯ ವಿಶಿಷ್ಠ ಆಚರಣೆಯಿಂದೆ. ಊರ ದೇವಸ್ಥಾನದ ಮುಂದೆ ಹೋಳಿ ಹುಣ್ಣಿಮೆಯ ಸಾಯಂಕಾಲ ಹೋಳಿಯನ್ನು ಹೊತ್ತಿಸಲಾಗುತ್ತದೆ. ಹೋಳಿ ಎಂದರೆ ಕಾಮನ ಪ್ರತಿರೂಪ. ಇದನ್ನು ಔಡಲಗಿಡ, ತೆಂಗಿನಗಿಡ, ಅಡಿಕೆಗಿಡ ಅಥವಾ ಕಬ್ಬನ್ನು ಮಧ್ಯ ನಿಲ್ಲಿಸಿ, ಅದರ ಸುತ್ತಲೂ ಬೆರಣಿ ಮತ್ತು ಒಣ ಕಟ್ಟಿಗೆಗಳನ್ನು ಕಟ್ಟಿ. ಸುಲಭವಾಗಿ ದಹನವಾಗುವ ರೀತಿಯಲ್ಲಿ ರಚಿಸಲಾಗಿರುತ್ತದೆ.
ನಂತರ ಇದನ್ನು ಊರ ಮುಖಂಡ ಪೂಜೆ ಮಾಡಿ, ನೈವೇದ್ಯ ನೀಡಿ, ಹೋಳಿಯನ್ನು ಹೊತ್ತಿಸುತ್ತಾನೆ. ಹೋಳಿ ಹೊತ್ತಿಕೊಂಡಾಗ ಅದರ ಸುತ್ತ ಪ್ರದಕ್ಷಿಣೆ ಹಾಕಲಾಗುತ್ತದೆ. ನಂತರ ಪ್ರಸಾದದ ರೂಪದಲ್ಲಿ ತೆಂಗಿನ ಕಾಯಿ, ಹಲಸು ಮುಂತಾದ ಹಣ್ಣುಗಳನ್ನು ಹಂಚಲಾಗುತ್ತದೆ.
ಹೋಳಿ ಹುಣ್ಣಿಮೆಯ ರಾತ್ರಿಯನ್ನು ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳನ್ನು ನಡೆಸಿ ಆಚರಿಸಲಾಗುತ್ತದೆ.

ಭಾರತದಾದ್ಯಂತ ಆಚರಿಸಲ್ಪಡುವ ಮನೋರಂಜನೆಯ ಹಬ್ಬ ಹೋಳಿ ಹಬ್ಬ ವರ್ಷಪೂರ್ತಿ ಹರ್ಷ ತರಲಿ, ಓಕುಳಿಯಾಡಿ ಖುಷಿಪಟ್ಟ ಎಲ್ಲರಲ್ಲಿಯೂ ಇಡೀ ವರ್ಷಪೂ ಹರ್ಷದ ರಂಗು ಮಾಸದಿರಲಿ ಎಂಬುದು ನಮ್ಮ ಹಾರೈಕೆ.

–>