-->

Sri Shankaracharya Narayana slokas lyrics in kannada with meaning

ನಾರಾಯಣ ಸ್ತೋತ್ರ

ಶ್ಲೋಕ - 1 -  ಸಂಸ್ಕೃತದಲ್ಲಿ :

ನಾರಾಯಣ ನಾರಾಯಣ ಜಯ ಗೋವಿಂದ ಹರೇ
ನಾರಾಯಣ ನಾರಾಯಣ ಜಯ ಗೋಪಾಲ ಹರೇ 

ಕನ್ನಡದಲ್ಲಿ :

ನಾರಾಯಣ ನಾರಾಯಣ ಜಯ ಗೋವಿಂದ ಹರಿ
ನಾರಾಯಣ ನಾರಾಯಣ ಜಯ ಗೋಪಾಲ ಹರಿ

ವಿವರಣೆ :

ಎಲ್ಲರನ್ನೂ ರಕ್ಷಿಸುವ ಹೇ ದೇವಾ ! ಗೋವಿಂದ ! ನಾರಾಯಣ ! ಜಯವಾಗಲಿ
ಹೇ ಗೋಪಾಲ ! ಎಲ್ಲರನ್ನೂ ರಕ್ಷಿಸುವವ, ನಾರಾಯಣ ! ಜಯವಾಗಲಿ

ಶ್ಲೋಕ - 2 -  ಸಂಸ್ಕೃತದಲ್ಲಿ :

ಕರುಣಾಪಾರಾವಾರ ವರುಣಾಲಯಗಂಭೀರ ನಾರಾಯಣ
ಘನನೀರದಸಂಕಾಶ ಕೃತಕಲಿಕಲ್ಮಷನಾಶನ ನಾರಾಯಣ


ಕನ್ನಡದಲ್ಲಿ :

ಕರುಣೆಯ ಕಡಲು ಸಾಗರದೊಲು ಗಂಭೀರ ನಾರಾಯಣ
ಘನನೀರದ ಶ್ಯಾಮನೆ ಕಲಿಕಲುಷ ವಿನಾಶನ ನಾರಾಯಣ

ವಿವರಣೆ :

ಹೇ ದಯಾಸಾಗರನೇ ಎಲ್ಲ ದೇವರುಗಳಲ್ಲಿ ಸಾಗರದಂತೆ ಭವ್ಯವಾದ ನಾರಾಯಣನೇ ! ದಟ್ಟವಾದ ಮೋಡಗಳಂತೆ ಕಂಗೊಳಿಸುವ ಹೇ ದೇವನೆ ! ಕಲಿಯುಗದ ಹಾನಿಕಾರಕ ಹಾಗೂ ನೀಚತನವನ್ನು ನಾಶಮಾಡುವ ಹೇ ದೇವನೆ !

ಶ್ಲೋಕ - 3 -  ಸಂಸ್ಕೃತದಲ್ಲಿ :

ಯಮುನಾತೀರವಿಹಾರ ಧೃತಕೌಸ್ತುಭಮಣಿಹಾರ ನಾರಾಯಣ
ಪೀತಾಂಬರಪರಿಧಾನ ಸುರಕಲ್ಯಾಣನಿಧಾನ ನಾರಾಯಣ
ಕನ್ನಡದಲ್ಲಿ :

ಯಮುನಾತೀರ ವಿಹಾರಿ ಕೌಸ್ತುಭಮಣಿಶೋಭಿತ ನಾರಾಯಣ
ಪೀತಾಂಬರಧಾರಿ ಸುರಕಲ್ಯಾಣನಿಧಿಯೆ ನಾರಾಯಣ

ವಿವರಣೆ :

ಯಮುನಾ ನದಿಯ ದಡದಲ್ಲಿ ಗೋಪಾಲಕರೊಂದಿಗೆ ಆಟ ಪಾಟಗಳೊಂದಿಗೆ ನಲಿದಾಡಿದ ಹಾಗೂ ಸಾಗರ ಮಥನದಲ್ಲಿ ಉದ್ಭವಿಸಿದ ಹದಿನಾಲ್ಕು ರತ್ನಗಳಲ್ಲಿ ನಾಲ್ಕನೇ ರತ್ನವಾದ ಕೌಸ್ತುಭಮಣಿಯಿಂದ ಕೂಡಿದ ಮಾಲೆಯನ್ನು ಧರಿಸಿರುವ ಓ ! ನಾರಾಯಣನೇ ! ದೈವತ್ವವನ್ನು ಪ್ರತಿನಿಧಿಸುವ ಹಳದಿ ಬಣ್ಣದ ರೇಷ್ಮೆ ವಸ್ತ್ರವನ್ನು ಧರಿಸಿ ಎಲ್ಲ ದೇವಾನು ದೇವತೆಗಳಿಗೆ ಸದಾಚಾರಗಳ ಭಂಡಾರನಾದ ಓ ! ನಾರಾಯಣನೇ !

ಶ್ಲೋಕ - 4 -  ಸಂಸ್ಕೃತದಲ್ಲಿ :

ಮಂಜುಲಗುಂಜಾಭೂಷ ಮಾಯಾಮಾನುಷವೇಷ ನಾರಾಯಣ
ರಾಧಾಧರಮಧುರಸಿಕ ರಜನೀಕರಕುಲತಿಲಕ ನಾರಾಯಣ
ಕನ್ನಡದಲ್ಲಿ :

ಮಂಜುಳ ಗುಂಜೀಹಾರ ವಿಭೂಷಿತ ಮಾಯಾ ಮಾನುಷವೇಷ ನಾರಾಯಣ
ರಾಧೆಯಧರ ಮಧುರಾಮೃತರಸಿಕ ಯದುವರ ನಾರಾಯಣ

ವಿವರಣೆ :

ಮಹಾಲಕ್ಷ್ಮಿಯನ್ನು ಸಂಕೇತಿಸುವ ರಕ್ತವರ್ಣದ ಗುಂಜ ಮಣಿಗಳಿಂದ ಕೂಡಿದ ಮುದ್ದಾದ ಹಾರವನ್ನು ಧರಿಸಿರುವ ಹಾಗೂ ಬೇಕೆಂದಾಗ ಅದೃಷ್ಯ ಮಾನವನ ರೂಪವನ್ನು ಧರಿಸುವ ಹೇ ದೇವ ದೇವನೇ ! ಓ ! ನಾರಾಯಣ !
ಬೃಂದಾವನದಲ್ಲಿನ ರಾಧೆಯ ತುಟಿಗಳಿಂದ ಹೊರಸೂಸುವ ಜೇನನ್ನು ಸವಿದು ಆನಂದಿಸಿದ ಹಾಗೂ ಚಂದ್ರವಂಶದ ರಾಜಕುವರನೇ ! ಓ ! ನಾರಾಯಣನೇ !

ಶ್ಲೋಕ - 5 -  ಸಂಸ್ಕೃತದಲ್ಲಿ :

ಮುರಲೀಗಾನವಿನೋದ ವೇದಸ್ತುತಭೂಪಾದ ನಾರಾಯಣ
ಬರ್ಹಿನಿಬರ್ಹಾಪೀಡ ನಟನಾಟಕಫಣಿಕ್ರೀಡ ನಾರಾಯಣ
ಕನ್ನಡದಲ್ಲಿ :

ವೇಣುಗಾನ ವಿನೋದಿ ವೇದನುತಪಾದ ನಾರಾಯಣ
ನವಿಲಗರಿ ಧರಿಸಿದ ಘನಫಣಿಶಿರ ನರ್ತಕ ನಾರಾಯಣ

ವಿವರಣೆ :

ಕೊಳಲಿನಿಂದ ಸುಶ್ರಾವ್ಯವಾದ ಗಾಯನವನ್ನು ಹೊರಡಿಸಿ ಅದರಿಂದ ಆನಂದತುಂದಿಲನಾದ ಹೇ ದೇವನೇ ! ನಿನ್ನ ಪವಿತ್ರ ಪಾದ ಪದ್ಮಗಳನ್ನು ವೇದಗಳೇ ವೈಭವಯುತವಾಗಿ ಹೊಗಳಿ ಸ್ತುತಿಸಿರುವುದು ಓ ನಾರಾಯಣನೇ ! ವರ್ಣ ವೈವಿಧ್ಯಮಯ ನೀಲಿ ಬಣ್ಣದ ಸುಂದರ ನವಿಲಿಗರಿಯನ್ನು ಧರಿಸಿರುವ ಹೇ ದೇವನೇ ! ವಿಷಪೂರಿತ ಕಾಳಿಂಗ ಸರ್ಪದ ಹೆಡೆಯ ಮೇಲೇರಿ ನರ್ತಿಸಿದ ಹೇ ದೇವನೇ ! ನಾರಾಯಣನೇ !

ಶ್ಲೋಕ - 6 -  ಸಂಸ್ಕೃತದಲ್ಲಿ :

ವಾರಿಜಭೂಷಾಭರಣ ರಾಜೀವರುಕ್ಮಿಣೀರಮಣ ನಾರಾಯಣ
ಜಲರುಹದಲನಿಭನೇತ್ರ ಜಗದಾರಂಭಕಸೂತ್ರ ನಾರಾಯಣ
ಕನ್ನಡದಲ್ಲಿ :

ಜಲಜಾಭರಣ ಭೂಷಿತ ಜಲಧಿಸುತೆಯ ರಮಣ ನಾರಾಯಣ
ಜಲರುಹದಳದೊಲು ನಯನ ಜಗದುಗಮ ಸೂತ್ರ ನಾರಾಯಣ

ವಿವರಣೆ :

ಕಮಲ ಪುಷ್ಪವನ್ನೆ ಆಭರಣವನ್ನಾಗಿ ಧರಿಸಿರುವ ಹಾಗೂ ಪದ್ಮ ಪುತ್ರಿ ರುಕ್ಮಿಣಿಯ ರಮಣನೇ  ಓ, ದೇವ ! ನಾರಾಯಣನೇ ! ಪದ್ಮಪುಷ್ಪದಂಥಹ ನೇತ್ರವುಳ್ಳವನೇ ವಿಶ್ವ ಸೃಷ್ಟಿಗೇ ಕಾರಣನೇ ಓ ದೇವ ! ನಾರಾಯಣನೇ !

ಶ್ಲೋಕ - 7 -  ಸಂಸ್ಕೃತದಲ್ಲಿ :

ಪಾತಕರಜನೀಸಂಹರ ಕರುಣಾಲಯ ಮಾಮುದ್ಧರ ನಾರಾಯಣ
ಅಘ ಬಕಹಯಕಂಸಾರೇ ಕೇಶವ ಕೃಷ್ಣ ಮುರಾರೇ ನಾರಾಯಣ
ಕನ್ನಡದಲ್ಲಿ :

ಪಾತಕರಜ ಸಂಹಾರಕ ಕರುಣಾಲಯ ಉದ್ಧರಿಸೆನ್ನನು ನಾರಾಯಣ
ಅಘ ಬಕಹಯ ಕಂಸಾರಿಯೆ ಕೇಶವ ಕೃಷ್ಣಮುರಾರಿ ನಾರಾಯಣ

ವಿವರಣೆ :

ದುಷ್ಕರ್ಮಗಳ ಕತ್ತಲಿನ ಕೂಪವನ್ನು ನಾಶಮಾಡುವ ಓ ದೇವನೇ ! ನಿನ್ನ ಕರುಣೆಯಿಂದ ನನ್ನನ್ನು ಉದ್ಧರಿಸುವ ನಾರಾಯಣನೇ ! ನಿನ್ನ ಸೋದರಮಾವನಾದ ಕಂಸನು ಕಳುಹಿಸಿದ  ಅಘಾಸುರ ಹಾಗೂ ಭಗಾಸುರರನ್ನು ಸಂಹರಿಸಿದವನೇ ಹಾಗೂ ಕಂಸನ ಪರಮ ವೈರಿಯೇ ಮುರಾಸುರನ ವೈರಿಯೇ ಓ ಕೇಶವಾ ಕೃಷ್ಣಾ ನಾರಾಯಣನೇ !

ಶ್ಲೋಕ - 8 -  ಸಂಸ್ಕೃತದಲ್ಲಿ :

ಹಾಟಕನಿಭಪೀತಾಂಬರ ಅಭಯಂ ಕುರು ಮೇ ಮಾವರ ನಾರಾಯಣ
ದಶರಥರಾಜಕುಮಾರ ದಾನವಮದಸಂಹಾರ ನಾರಾಯಣ
 

ಕನ್ನಡದಲ್ಲಿ :

ಮಿಸುನಿಯೊಲಿಹ ಪೀತಾಂಬರಧರ ಅಭಯ ಕೊಡೆನಗೆ ಮಾರಮಣ ನಾರಾಯಣ
ದಶರಥ ರಾಜಕುಮಾರ ರಕ್ಕಸಮದಸಂಹಾರ ನಾರಾಯಣ

ವಿವರಣೆ :

ಬಂಗಾರದಂತೆ ಝಗ ಝಗಿಸುವ ಹಳದಿ ಬಣ್ಣದ ಪೀತಾಂಬರವನ್ನು ಧರಿಸಿರುವ ಓ ದೇವನೇ ! ಲಕ್ಷ್ಮೀರಮಣ ನಾರಾಯಣನೇ ಕೃಪೆದೋರಿ ನನ್ನನ್ನು ರಕ್ಷಿಸು. ಓ ದೇವನೇ ದಶರಥ ರಾಜಕುಮಾರನೇ ಅಸುರರ ದರ್ಪವನ್ನು ನಾಶಮಾಡಿದವನೇ ಹೇ ನಾರಾಯಣನೇ !

ಶ್ಲೋಕ - 9 -  ಸಂಸ್ಕೃತದಲ್ಲಿ :

ಗೋವರ್ಧನಗಿರಿ ರಮಣ ಗೋಪೀಮಾನಸಹರಣ ನಾರಾಯಣ
ಸರಯೂತೀರವಿಹಾರ ಸಜ್ಜನ ಋಷಿಮಂದಾರ ನಾರಾಯಣ
ಕನ್ನಡದಲ್ಲಿ :

ಗೋವರ್ಧನಗಿರಿ ಪ್ರಿಯಕರ ಗೋಪೀಮಾನಸ ಚೋರ ನಾರಾಯಣ
ಸರಯೂ ತೀರ ವಿಹಾರ ಸುಜನರ ಸುರತರು ನಾರಾಯಣ

ವಿವರಣೆ :

ಗೋವರ್ಧನ ಪರ್ವತವನ್ನು ಉದ್ಧರಿಸಿದ ಓ ದೇವನೇ ! ಗೋಪಿಕಾ ಸ್ತ್ರೀಯರ ಚಿತ್ತ ಚೋರನೇ ಹೇ ನಾರಾಯಣನೇ ! ಓ ದೇವನೇ!  ಸರಯೂ ನದಿ ತೀರದಲ್ಲಿ ಆಡಿ ಬೆಳೆದವನೇ ಸಜ್ಜನರ ಆಸೆಗಳನ್ನು ಪೂರೈಸುವ ವೃಕ್ಷದಂತಿರುವ ಓ ದೇವನೇ ನಾರಾಯಣನೇ !

Sri Shankaracharya Narayana slokas lyrics in kannada with meaning



ಶ್ಲೋಕ - 10 - ಸಂಸ್ಕೃತದಲ್ಲಿ :

ವಿಶ್ವಾಮಿತ್ರಮಖತ್ರ ವಿವಿಧಪರಾಸುಚರಿತ್ರ ನಾರಾಯಣ
ಧ್ವಜವಜ್ರಾoಕುಶಪಾದ ಧರಣೀಸುತಸಹಮೋದ ನಾರಾಯಣ
ಕನ್ನಡದಲ್ಲಿ :

ಯತಿವಿಶ್ವಾಮಿತ್ರ ಯಜ್ಞ ಸುರಕ್ಷಕ ವಿವಿಧ ಸುಚರಿತ್ರ ನಾರಾಯಣ
ಧ್ವಜ ವಜ್ರಾಂಕುಶಪಾದ ಧರಣಿಸುತೆಯೊಡನೆ ಮೋದ ನಾರಾಯಣ

ವಿವರಣೆ :

ವಿಶ್ವಾಮಿತ್ರರ ಯಾಗವನ್ನು ರಕ್ಷಿಸಿ ಪರಿಪೂರ್ಣಗೊಳಿಸಿದ ಅನೇಕ ಉತ್ತಮ ಚರಿತ್ರೆಯುಳ್ಳ ನಾರಾಯಣನೇ !  ಪಾದಗಳಲ್ಲಿ ಧ್ವಜ ಹಾಗೂ ಧ್ವಜ ಸ್ತಂಭದ ಚಿನ್ಹೆಯುಳ್ಳ ಹೇ ದೇವನೇ ! ಭೂದೇವಿಯ ಮಗಳಿಂದ ಆನಂದವನ್ನು ಪಡೆದ ಹೇ ದೇವನೇ ನಾರಾಯಣನೇ!

ಶ್ಲೋಕ - 11-  ಸಂಸ್ಕೃತದಲ್ಲಿ :

ಜನಕಸುತಾಪ್ರತಿಪಾಲ ಜಯ ಜಯ ಸಂಸ್ಕೃತಿಲೀಲ ನಾರಾಯಣ
ದಶರಥವಾಗ್ಧೃತಿಭಾರ ದಂಡಕವನಸಂಚಾರ ನಾರಾಯಣ
ಕನ್ನಡದಲ್ಲಿ :

ಜನಕಸುತಾಲೋಲ ಜಯ ಜಯ ಸಂಸಾರಲೀಲ ನಾರಾಯಣ
ಜನಕವಚನಪಾಲಕ ವನದಂಡಕಸಂಚಾರಿ ನಾರಾಯಣ

ವಿವರಣೆ :

ಜನಕರಾಜನ ಪುತ್ರಿಗಾಗಿ ಕಾದುಕೊಂಡಿದ್ದ ಓ ದೇವನೇ ! ಜೀವನ ನಾಟಕದ ಆಟಗಳನ್ನು ನೋಡಿ ಆನಂದಿಸಿದ ದೇವನಿಗೆ ಜಯವಾಗಲಿ ಜಯವಾಗಲಿ ನಾರಾಯಣನೇ ! ದಶರಥ ರಾಜನ ಮಾತನ್ನು ಪಾಲಿಸಿದ ಓ ದೇವನೇ ! ದಟ್ಟವಾದ ದಂಡಕವನವನ್ನೆಲ್ಲ ಬರೀ ಕಾಲ್ನಡಿಗೆಯಲ್ಲಿ ಸಂಚರಿಸಿದ ಓ ದೇವನೇ ನಾರಾಯಣನೇ !

ಶ್ಲೋಕ - 12 -  ಸಂಸ್ಕೃತದಲ್ಲಿ :

ಮುಷ್ಟಿಕಚಾಣೂರಸಂಹಾರ ಮುನಿಮಾನಸವಿಹಾರ ನಾರಾಯಣ
ವಾಲಿವಿನಿಗ್ರಹಶೌರ್ಯ ವರಸುಗ್ರೀವಹಿತಾರ್ಯ ನಾರಾಯಣ
ಕನ್ನಡದಲ್ಲಿ :

ಮುಷ್ಟಿಕಚಾಣೂರರ ಮಣಿಸಿದ ಮುನಿಮನ ವಾಸಿ ನಾರಾಯಣ
ದುಷ್ಟ ವಾಲಿಯ ನಿಗ್ರಹಿಸಿ ವರ ಸುಗ್ರೀವಗನುಗ್ರಹಿಸಿದ ನಾರಾಯಣ

ವಿವರಣೆ :

ಕಂಸನ ಆಸ್ಥಾನದಲ್ಲಿ ಮುಷ್ಟಿಯುದ್ಧದಲ್ಲಿ ದುಷ್ಟ ಮುಷ್ಟಿಕ ಹಾಗೂ ಚಾಣೂರರನ್ನು ಸಂಹಾರ ಮಾಡಿದ ಓ ದೇವನೇ ! ಋಷಿ ಮುನಿಗಳ ಮನಸ್ಸಿನಲ್ಲಿ ನೆಲೆಸಿರುವ ಓ ದೇವನೇ ! ನಾರಾಯಣನೇ ! ಪರಾಕ್ರಮಿ ವಾಲಿಯನ್ನು ಸಂಹಾರ ಮಾಡಿ ಸುಗ್ರೀವನಿಗೆ ಸಹಾಯ ಮಾಡಿದ  ಓ ದೇವನೇ ! ನಾರಾಯಣನೇ !

ಶ್ಲೋಕ - 13 -  ಸಂಸ್ಕೃತದಲ್ಲಿ :

ಮಾಂ ಮುರಲೀಕರ ಧೀವರಪಾಲಯ ಪಾಲಯ ಶ್ರೀಧರ ನಾರಾಯಣ
ಜಲನಿಧಿ ಬಂಧನ ಧೀರ ರಾವಣಕಂಠವಿದಾರ ನಾರಾಯಣ
ಕನ್ನಡದಲ್ಲಿ :

ಕೊಳಲನು ಮಾಡೆನ್ನನು ಪಾಲಿಸು ಪಾಲಿಸು ಶ್ರೀಧರ ನಾರಾಯಣ
ಜಲಧಿನಿಬಂಧನ ಧೀರನೆ ದಶಶಿರಕಂಠವ ಸೀಳಿದ ನಾರಾಯಣ

ವಿವರಣೆ :

ಕೊಳಲನ್ನು ಕೈಯಲ್ಲಿ ಹಿಡಿದಿರುವ ಓ ಶೌರಿಯೇ ಲಕ್ಷ್ಮೀರಮಣನೇ ಸಹಾಯ ಮಾಡು ಸಹಾಯ ಮಾಡು ನಾರಾಯಣನೇ. ಸಾಗರದ ಮೇಲೆ ಸೇತುವೆ ನಿರ್ಮಿಸಿದ ಓ ದೇವನೇ ! ರಾವಣನ ದಶ ಶಿರಗಳನ್ನು ತರಿದ ನಾರಾಯಣನೇ !

ಶ್ಲೋಕ - 14 -  ಸಂಸ್ಕೃತದಲ್ಲಿ :

ತಾಟಕಮರ್ದನ ರಾಮ ನಟಗುಣವಿವಿಧ ಸುರಾಮ ನಾರಾಯಣ
ಗೌತಮಪತ್ನೀಪೂಜನ ಕರುಣಾಘನಾವಲೋಕನ ನಾರಾಯಣ
ಕನ್ನಡದಲ್ಲಿ :

ತಾಟಕಿಮರ್ದನ ರಾಮ ಸುರನಾಟ್ಯಗಾನಾರಾಮ ನಾರಾಯಣ
ಗೌತಮಸತಿ ಪೂಜಿತ ಕರುಣಾರಸ ಸೇಚನ ನಾರಾಯಣ

ವಿವರಣೆ :

ತಾಟಕಿಯ ಅಹಂಕಾರವನ್ನು ಸಂಹರಿಸಿದ ಓ ದೇವನೇ ! ದೇವಾನು ದೇವತೆಗಳು ಗಾನ ನಾಟ್ಯಗಳಿಂದ ವರ್ಣಿಸಲ್ಪಡುವ ಓ ದೇವನೇ ನಾರಾಯಣನೇ ! ಗೌತಮ ಪತ್ನಿ ಅಹಲ್ಯೆಯಿಂದ ಪೂಜಿಸಲ್ಪಟ್ಟ ಹೇ ದೇವನೇ ಕರುಣಾಪೂರಿತ ದೃಷ್ಟಿಯುಳ್ಳವನೇ ನಾರಾಯಣನೇ !

ಶ್ಲೋಕ - 15 -  ಸಂಸ್ಕೃತದಲ್ಲಿ

ಸಂಭ್ರಮಸೀತಾಹಾರ ಸಾತಕೇತಪುರವಿಹಾರ ನಾರಾಯಣ
ಅಚಲೋಧೃತಚಂಚತ್ಕರ ಭಕ್ತಾನುಗ್ರಹತತ್ಪರ ನಾರಾಯಣ
ಕನ್ನಡದಲ್ಲಿ :

ಜಾನಕೀಮನ ಚೋರ ಸಾಕೇತಪುರ ವಿಹಾರ ನಾರಾಯಣ
ಗೋವರ್ಧನಗಿರಿಧರ ಧೀರ ಭಕ್ತಾನುಗ್ರಹತತ್ಪರ ನಾರಾಯಣ

ವಿವರಣೆ :

ಜನಕರಾಜನ ಪ್ರೀತಿಯ ಪುತ್ರಿಯ ಮನವನ್ನು ಕದ್ದ ಓ ದೇವನೇ ! ಅಯೋಧ್ಯಾ ನಿವಾಸಿಯೇ ನಾರಾಯಣನೇ, ಪರ್ವತವನ್ನೇ ಮೇಲೆತ್ತಲು ಶಕ್ಯನಾದ ಓ ದೇವನೇ ! ಸದಾ ಭಕ್ತರನ್ನು ಆಶೀರ್ವದಿಸಲು ಉತ್ಸುಕನಾಗಿರುವ ಓ ದೇವನೇ ! ನಾರಾಯಣನೇ !

ಶ್ಲೋಕ - 16 -  ಸಂಸ್ಕೃತದಲ್ಲಿ :

ನೈಗಮಗಾನವಿನೋದ ರಕ್ಷಿತ ಸುಪ್ರಹ್ಲಾದ ನಾರಾಯಣ
ಭಾರತ ಯತಿವರಶಂಕರ ನಾಮಾಮೃತಮಖಿಲಾಂತರ ನಾರಾಯಣ
ಕನ್ನಡದಲ್ಲಿ :

ಸಾಮಗಾನವಿನೋದ ರಾಕ್ಷಸಸುತ ಪ್ರಹ್ಲಾದವರದ ನಾರಾಯಣ
ವರಶಂಕರರುಲಿದ ಹರಿನಾಮಸುಧಾಸಾರ ಜಗಸಕಲಕಾಧಾರ ನಾರಾಯಣ

ವಿವರಣೆ :

ಸಾಮಗಾನ ಪ್ರಿಯನಾದ ಓ ದೇವನೇ ! ಹಿರಣ್ಯ ಕಶಿಪುವಿನ ಪುತ್ರನಾದ ಪ್ರಹ್ಲಾದನನ್ನು ರಾಕ್ಷಸರಿಂದ ರಕ್ಷಿಸಿದವನೇ ಓ ನಾರಾಯಣನೇ ! ಆದಿ ಶಂಕರರು ರಚಿಸಿದ ಈ ಹರಿಯ ನಾಮದ ಅಮೃತ ಸಾರವು ಜಗತ್ತಿನ ಸಮಸ್ತರಿಗೂ ಶುಭವನ್ನುಂಟುಮಾಡಲಿ.

ಶ್ಲೋಕ - 17 -  ಸಂಸ್ಕೃತದಲ್ಲಿ :

ನಾರಾಯಣ ನಾರಾಯಣ ಜಯ ಗೋವಿಂದ ಹರೇ
ನಾರಾಯಣ ನಾರಾಯಣ ಜಯ ಗೋಪಾಲ ಹರೇ    
ಕನ್ನಡದಲ್ಲಿ :

ನಾರಾಯಣ ನಾರಾಯಣ ಜಯ ಗೋವಿಂದ ಹರೇ
ನಾರಾಯಣ ನಾರಾಯಣ ಜಯ ಗೋಪಾಲ ಹರೇ

ವಿವರಣೆ :

ಎಲ್ಲರನ್ನೂ ರಕ್ಷಿಸುವ ಹೇ ದೇವಾ ! ಗೋವಿಂದ ! ನಾರಾಯಣ ! ಜಯವಾಗಲಿ
ಹೇ ಗೋಪಾಲ ! ಎಲ್ಲರನ್ನೂ ರಕ್ಷಿಸುವವ, ನಾರಾಯಣ ! ಜಯವಾಗಲಿ !


–>