-->

ಅಭ್ಯಂಜನ ಏಕೆ , ಎಣ್ಣೆ ಶಾಸ್ತ್ರ ಆರತಿ ಹಾಡು - Deepawali Abhyanjana , Aarathi song

ಶ್ರೀ ಕೃಷ್ಣನು ನರಕಾಸುರನನ್ನು ಸಂಹರಿಸಿದಾಗ ನರಕಾಸುರನು ಒಂದು ವರವನ್ನು ಕೇಳುತ್ತಾನೆ.  “ನನ್ನ ಸಂಹಾರದ ನೆನಪಿಗಾಗಿ ಎಲ್ಲರೂ ಅಭ್ಯಂಜನವನ್ನು ಮಾಡಬೇಕು ಮತ್ತು ದೀಪ ಪ್ರಜ್ವಲನವನ್ನು ಮಾಡಬೇಕು” ಎಂದು ಕೇಳಿದುದರಿಂದ ಕೃಷ್ಣನು ಹಾಗೆಯೇ ಆಗಲಿ ಎಂದು ಅನುಗ್ರಹಿಸಿದ್ದನು.   ಶ್ರೀಕೃಷ್ಣನು ನರಕಾಸುರನನ್ನು ಸಂಹರಿಸಿದಾಗ ಅವನ ಮೇಲೆ ರಕ್ತದ ಕಲೆಗಳು ಸಿಡಿದಿದ್ದವು.  ಅದನ್ನು ತೊಳೆದುಕೊಳ್ಳಲೆಂಬಂತೆ ಶ್ರೀಕೃಷ್ಣನೂ ಸಹ ಎಣ್ಣೆ-ನೀರನ್ನು ಹಾಕಿಕೊಂಡಿದ್ದನು.  ಅದರಂತೆ ಈದಿನ ಹಬ್ಬವನ್ನಾಗಿ ಆಚರಿಸಿ, ಅಭ್ಯಂಜನ ಮಾಡಿ ಕೊಳ್ಳುವ ಪರಿಪಾಠವಿದೆ.  ನರಕಾಸುರ ಸಾಯುವ ಮುನ್ನ ಈ ದಿನವನ್ನು ಬಣ್ಣಬಣ್ಣದ ದೀಪಗಳನ್ನು ಹಚ್ಚಿ ಆಚರಿಸಬೇಕೆಂದು ಕೋರಿದನು.  ಅದರಂತೆ ಪಟಾಕಿ ಸಿಡಿಸಿ ಸಂಭ್ರಮಿಸುತ್ತೇವೆ. 

ಕೆಲವು ವರ್ಷ ನರಕ ಚತುರ್ದಶಿಯಂದೇ ಅಮಾವಾಸ್ಯೆಯ ಆಚರಣೆಯಿರುವಾಗ ಎಣ್ಣೆನೀರು ಹಾಕಿಕೊಳ್ಳಬಹುದಾ? –    ಹಾಕಿಕೊಳ್ಳಬಹುದು. ನರಕಚತುರ್ದಶಿ ಸ್ನಾನ ಮಾಡಲೇಬೇಕಾದ್ದರಿಂದ ಅಮಾವಾಸ್ಯೆ ಇದ್ದರೂ ಎಣ್ಣೆ ಸ್ನಾನ ಮಾಡಬಹುದು

 
ಮಗಳಿಗೆ ಮದುವೆ ಮಾಡಿದ ನಂತರ ಬರುವ ಮೊದಲ ದೀಪಾವಳಿ ನಿಮಿತ್ತ ಅಳಿಯ, ಮಗಳಿಗೆ ವಿಶೇಷ ಉಡುಗೊರೆ ನೀಡಬೇಕು.       ತೈಲಾಭ್ಯಂಜನ ಕಡ್ಡಾಯ –  ನರಕ ಚತುರ್ದಶಿಯಂದು ಪ್ರತಿಯೊಬ್ಬ ಜೀವಿಯೂ ಅಭ್ಯಂಜನವನ್ನು ಮಾಡಲೇಬೇಕು.  ಇಲ್ಲದಿದ್ದರೆ ದಾರಿದ್ರ್ಯಾದಿಗಳಿಂದ ಪೀಡಿತರಾಗುವರು. ಈ ದಿನ ಗಂಗೆಯು ಜಲದಲ್ಲಿ ಮತ್ತು ತೈಲದಲ್ಲಿ ಲಕ್ಷ್ಮೀದೇವಿಯು ವಿಶೇಷವಾಗಿ ಸನ್ನಿಹಿತಳಾಗಿರುತ್ತಾರೆ. ಸಾಮಾನ್ಯವಾಗಿ ತಂದೆ ತಾಯಿಗಳ ಶ್ರಾದ್ಧ ದಿನಗಳಲ್ಲಿ, ವ್ಯತೀಪಾತ, ವೈಧೃತಿ ಯೋಗಗಳಲ್ಲಿ ಅಭ್ಯಂಜನವನ್ನು ಮಾಡಿಕೊಳ್ಳುವ ಸಂಪ್ರದಾಯವಿಲ್ಲ.  ವಿಧವೆಯರೂ, ಸನ್ಯಾಸಿಗಳೂ ಅಭ್ಯಂಜನವನ್ನು ಮಾಡಿಕೊಳ್ಳಬಾರದು ಸಾಮಾನ್ಯವಾಗಿ.  ಆದರೆ ನರಕ ಚತುರ್ದಶಿಯಂದು ಇದೆಲ್ಲ ಇದ್ದರೂ ಕೂಡ ಅಭ್ಯಂಜನವನ್ನು ಮಾಡಲೇಬೇಕು.   ಸನ್ಯಾಸಿಗಳೂ, ವಿಧವೆಯರೂ ಅಭ್ಯಂಜನವನ್ನು ಮಾಡಿಕೊಳ್ಳಲೇಬೇಕು.

ಅಭ್ಯಂಜನ ಏಕೆ , ಎಣ್ಣೆ ಶಾಸ್ತ್ರ ಆರತಿ ಹಾಡು - Deepawali Abhyanjana , Aarathi song



ಎಣ್ಣೆಶಾಸ್ತ್ರ (ನರಕ ಚತುರ್ದಶಿಯಂದು) –

ಮೊದಲು ಮನೆಯ ಹಿರಿಯರೊಬ್ಬರು ಸ್ನಾನ ಮಾಡಿ ಎಣ್ಣೆಯನ್ನು ಪರಮಾತ್ಮನಿಗೆ ಸಮರ್ಪಿಸಬೇಕು.  ಈದಿನ ಪ್ರಾತ: ಕಾಲ ಶುಚಿರ್ಭೂತನಾಗಿ ಬಿಸಿನೀರು, ಎಳ್ಳೆಣ್ಣೆ, ಸೀಗೆಪುಡಿ, ಅರಿಶಿನ, ಮುಂತಾದುವನ್ನು ದೇವರ ಮುಂದಿಟ್ಟು ಪ್ರಾರ್ಥಿಸಬೇಕು.

ಎಣ್ಣೆ ಶಾಸ್ತ್ರವನ್ನು ಸೂರ್ಯೋದಯದ ಮುನ್ನವೇ ಮಾಡಬೇಕು.

ಎಣ್ಣೆ ಹಚ್ಚಿಕೊಂಡ ನಂತರ ಸ್ನಾನ ಆಗುವವರೆಗೂ ಯಾರಿಗೂ ನಮಸ್ಕಾರ ಮಾಡಬೇಡಿ.

ಪ್ರಾತಃ ಕಾಲೇ ನರಕಾಂತಕ ಶ್ರೀ ರುಕ್ಮಿಣಿ ಸತ್ಯಭಾಮಾ ಸಹಿತ ಶ್ರೀ ಗೋಪಾಲಕೃಷ್ಣ ಪ್ರೇರಣಯಾ, ಶ್ರೀ ಗೋಪಾಲಕೃಷ್ಣ ಪ್ರೀತ್ಯರ್ಥಂ  ಸಶ್ರೀಕಾಯ ಸಪರಿವಾರಾಯ ಶ್ರೀ ಗೋಪಾಲಕೃಷ್ಣಾಯ ಸುಗಂಧಿ ತೈಲಾಭ್ಯಂಗ ಸ್ನಾನ ಸಮರ್ಪಣಂ ಕರಿಷ್ಯೇ.

“ತೈಲೇ ಲಕ್ಷ್ಮೀ: ಜಲೇ ಗಂಗಾ ದೀಪಾವಲ್ಯಾಂ ಚತುರ್ದಶೀ |
ಪ್ರಾತ: ಸ್ನಾನಂ ತು ಯ: ಕುರ್ಯಾತ್ ಯಮಲೋಕಂ ನ ಪಶ್ಯತಿ|
ತೈಲದಲ್ಲಿ ಲಕ್ಷಿಯೂ, ಜಲದಲ್ಲಿ ಗಂಗೆಯನ್ನೂ ಮನಸಾ ಚಿಂತಿಸಬೇಕು.
ಯಾರು ನರಕ ಚತುರ್ದಶಿ ದಿನದಂದು ದೀಪವನ್ನು ಬೆಳಗಿಸಿ, ದೇವರಿಗೆ ಎಣ್ಣೆಯ ಸಮರ್ಪಿಸಿ ತಾವೂ ಅಭ್ಯಂಜನ ಮಾಡಿಕೊಳ್ಳುತ್ತಾರೋ ಅವರಿಗೆ ಯಮಲೋಕ ವಾಸವಿರುವುದಿಲ್ಲ.

ಲಕ್ಷ್ಮಿಯು ಶ್ರೀಮನ್ನಾರಾಯಣನಿಗೆ ಅಭ್ಯಂಜನ ಸ್ನಾನ ಮಾಡಿಸುವಳೆಂದು ಭಾವಿಸಿ, ನಾರಾಯಣನಿಗೆ ಸಮರ್ಪಿಸಿ, ನಂತರ ಆ ಎಣ್ಣೆಯಿಂದಲೇ ಎಲ್ಲರಿಗೂ ಎಣ್ಣೆ ಶಾಸ್ತ್ರ ಮಾಡತಕ್ಕದ್ದು.
 

ಎಣ್ಣೆ ಶಾಸ್ತ್ರ ಎಲ್ಲರೂ ಮಾಡಿಸಿಕೊಳ್ಳತಕ್ಕದ್ದು.  ಮೊದಲು ಮನೆಯ ಹೆಂಗಸರು ಗಂಡಸರನ್ನೆಲ್ಲ ಕೂಡಿಸಿ, ದೇವರಿಗೆ ಸಮರ್ಪಿಸಿದ ಎಣ್ಣೆಯನ್ನು ಹಚ್ಚುವ ಶಾಸ್ತ್ರ ಮಾಡುತ್ತಾರೆ.  ಇಲ್ಲಿ ಎಣ್ಣೆ ಶಾಸ್ತ್ರಕ್ಕೆ ಕೂಡುವಾಗ ಉತ್ತರೀಯವಿರಲೇ ಬೇಕು.   ಮೊದಲು ದೇವರಬಳಿ, ತುಳಸಿಯ ಗಿಡದ ಬಳಿ ದೀಪವನ್ನು ಹಚ್ಚಬೇಕು.   ನಂತರ ಒಂದು ಮಣೆಯ ಮೇಲೋ ಅಥವಾ ಚಾಪೆಯ ಮೇಲೋ ಕುಳಿತುಕೊಳ್ಳಬೇಕು.  ಮನೆಯ ಹಿರಿಯ ಹೆಣ್ಣುಮಕ್ಕಳು ಎಲ್ಲರಿಗೂ ಮೊದಲು ಹಣೆಯಲ್ಲಿ ಕುಂಕುಮ ತಿಲಕವಿಡುತ್ತಾರೆ. ಚಿನ್ನದ ಉಂಗುರವನ್ನು  ಬಳಸಿ  ಎಣ್ಣೆ ಶಾಸ್ತ್ರ ಮಾಡಬೇಕು . ಚಿನ್ನದ ಉಂಗುರ ಇಲ್ಲದ ಪಕ್ಷದಲ್ಲಿ ಪಾರಿಜಾತ ಹೂ ಆಗಲಿ ಅಥವಾ ಮಲ್ಲಿಗೆ ಹೂ ಆಗಲಿ ಬಳಸಬಹುದು.  ಪ್ರತಿಯೊಬ್ಬರಿಗೂ ವಿಳ್ಳೆದೆಲೆಯ ಪಟ್ಟಿಯನ್ನು ಕೊಡುತ್ತಾರೆ ಅಥವಾ ಎಲ್ಲರಿಗೂ ಮುಟ್ಟಿಸಿ ಯಾರಾದರೂ ಒಬ್ಬರಿಗೆ ವಿಳ್ಳೆದೆಲೆ ಪಟ್ಟಿಯನ್ನು ನೀಡುತ್ತಾರೆ.   ಒಂದು ಬೆಳ್ಳಿಯ ಬಟ್ಟಲಿನಲ್ಲಿ ದೇವರಿಗೆ ಸಮರ್ಪಿಸಿದ ಎಣ್ಣೆಯನ್ನು ಅರಿಶಿನ ಸೇರಿಸಿ ಎಲ್ಲರಿಗೂ ಹಣೆಯಿಂದ ಪಾದದವರೆಗೂ ಸ್ವಲ್ಪ ಸ್ವಲ್ಪ ಹಚ್ಚುತ್ತಾರೆ.    

   ಎಣ್ಣೆ ಶಾಸ್ತ್ರ  ಮಾಡುವಾಗ ಹೇಳುವ ಮಂತ್ರ –

ಅಶ್ವತ್ಥಾಮಾ ಬಲಿರ್ವ್ಯಾಸೋ ಹನೂಮಾಂಶ್ಚ ವಿಭೀಷಣ: |
ಕೃಪ: ಪರಶುರಾಮಶ್ಚ ಸಪ್ತ್ಯೇತೇ ಚಿರಂಜೀವಿನ: ||
ಎಂದು ಏಳು ಸಲ ಭೂಮಿಗೆ ಮುಟ್ಟಿಸಿ, ಮೂರು ಸಲ ತಲೆಗೂ, ಭೂಮಿಗೂ ಎಣ್ಣೆಯನ್ನು ತಗುಲಿಸಿ, ಅರಿಶಿನ ಕುಂಕುಮಗಳಿಂದ ಪೂಜಿಸಿ ಅಭ್ಯಂಜನ ಸ್ನಾನ ಮಾಡಬೇಕು.
ಎಣ್ಣೆ ಶಾಸ್ತ್ರಕ್ಕೆ ಎಳ್ಳೆಣ್ಣೆಯನ್ನು ಉಪಯೋಗಿಸಬೇಕು.

ಎಣ್ಣೆ ಶಾಸ್ತ್ರ ಮಾಡಿಸಿಕೊಳ್ಳುವುದು ಪೂರ್ವಾಭಿಮುಖವಾಗಿ ಕೂಡಬೇಕು. ಎಣ್ಣೆ ಶಾಸ್ತ್ರಕ್ಕೆ ಕೂಡುವವರು ದೇವರಿಗೆ ನಮಿಸಿ ಕೂಡಬೇಕು. ನಂತರ ಎಲ್ಲರಿಗೂ ಆರತಿ ಮಾಡಬೇಕು.  ಆ ಸಮಯದಲ್ಲಿ ಈ ದೇವರನಾಮವನ್ನು ಹಾಡುವ ಕ್ರಮವಿದೆ.


ಎಣ್ಣೆ ಶಾಸ್ತ್ರ ಮಾಡುವ ಸಮಯದಲ್ಲಿ  ಹಾಡುವ ಹಾಡು

ಬಣ್ಣಿಸಿ ಗೋಪಿ ತಾ ಹರಸಿದಳು ||ಪ||
ಎಣ್ಣೆಯನೊತ್ತುತ ಯದುಕುಲ ತಿಲಕಗೆ || ಅ.ಪ.||
ಆಯುಷ್ಯವಂತನಾಗು ಅತಿ ಬಲ್ಲಿದನಾಗು |
ಮಯದ ಖಳರ ಮರ್ಧನನಾಗು |
ರಾಯರ ಪಾಲಿಸು ರಕ್ಕಸರ ಸೋಲಿಸು |
ವಾಯಸುತಗೆ ನೀ ನೊಡೆಯನಾಗೆನುತಲಿ ||1||
ಧೀರನು ನೀನಾಗು ದಯಾಂಬುಧಿಯಾಗು |
ಆ ರುಕ್ಮಿಣಿಗೆ ನೀನರಸನಾಗು |
ಮಾರನ ಪಿತನಾಗು ಮಧುಸೂದನನಾಗು |
ದ್ವಾರಾವತಿಗೆ ನೀ ದೊರೆಯಾಗೆನುತಲಿ ||2||
ಆನಂದ ನೀನಾಗು ಅಚ್ಯುತ ನೀನಾಗು |
ದಾನವಾಂತಕನಾಗು ದಯವಾಗು |
ಶ್ರೀನಿವಾಸನಾಗು ಶ್ರೀನಿಧಿ ನೀನಾಗು |
ಜ್ಜಾನಿ ಪುರಂದರ ವಿಠಲನಾಗೆನುತಲಿ ||3||

ಆರತಿ ಹಾಡು
ಸರಸಿಜ ನಯನಗೆ ಸಾಗರಶಯನಗೆ
ನಿರುತ ಸುಖಾನಂದಭರಿತನಾದವಗೆ
ಬರೆಸಿ ಉತ್ತರವ ಕಳುಹಿ ಹರುಷದಿ ತಂದ ಸತಿಯ-
ರರಸಿ ರುಕ್ಮಿಣಿ ಸಹಿತ ಹರುಷದಿ ಕುಳಿತ ಹರಿಗೆ
ಸರಸದಾರತಿಯ ಬೆಳಗಿರೆ ||ಪ||

ನಿಂದ್ಯ ಪರಿಹರಿಸಲು ಬಂದು ಯುದ್ಧವ ಮಾಡಿ
ಸಿಂಧುಗಟ್ಟಿದ ರಾಮಚಂದ್ರಗೆವೊಂದಿಸುತ
ತಂದು ಮಗಳ ಧಾರೆ ಮಂದರೋದ್ಧರಗೆರೆಯೆ
ಜಾಂಬುವಂತ್ಯೇರ ಸಹಿತಾನಂದದಿ ಕುಳಿತ ಹರಿಗೆ ||1||

ಮಿತ್ರೆ ಕಾಳಿಂದಿ ಭದ್ರಾ ಅಚ್ಚುತನೆಡಬಲ
ಲಕ್ಷಣ ನೀಲ ನಕ್ಷತ್ರದಂದಲಿ
ಒಪ್ಪುವಾ ಚಂದ್ರನಂಥ ವಾರಿಜಾಕ್ಷನು ಇರಲು
ಅಷ್ಟಭಾರ್ಯೆಯರ ಸಹಿತ ನಕ್ಕು ಕುಳಿತ ಹರಿಗೆ ||2||

ನಾಶವಾಗಲಿ ನರಕಾಸುರನ ಮಂದಿರ ಪೊಕ್ಕು
ಏಸುಜನ್ಮದ ಪುಣ್ಯ ಒದಗಿ ಶ್ರೀಹರಿಯು
ಶ್ರೀಶನೊಲಿದ ಭೀಮೇಶಕೃಷ್ಣನು ಸೋಳ-
ಸಾಸಿರ ಸತಿಯರಿಂದ್ವಿಲಾಸದಿ ಕುಳಿತ ಹರಿಗೆ ||3||

- ನರಹರಿ ಸುಮಧ್ವ

–>