-->

ನರಕಾಸುರನ ಸಂಹಾರ , Story of Deepawali Naraka Chaturdashi

ಆಶ್ವಯುಜ ಕೃಷ್ಣ ಪಕ್ಷ ಚತುರ್ದಶಿ ದಿನದಂದು ದೈತ್ಯ ನರಕಾಸುರನ ಸಂಹಾರವಾಯಿತು.  ಅವನ ಸಂಹಾರದಿಂದ ವಿಶ್ವವೇ ಸಂತಸಪಟ್ಟಿತು. ಆ ದಿನವನ್ನು ಹಬ್ಬವನ್ನಾಗಿ ಆಚರಿಸುವ ಸಂಪ್ರದಾಯ.  ಆ ನರಕಾಸುರ ಯಾರು, ಅವನ ಸಂಹಾರ ಯಾರು ಮಾಡಿದರು, ಏಕೆ ಮಾಡಿದರು ಎಂಬ ವಿವರ ಕೆಳಗೆ ಇದೆ

ಪರಮಾತ್ಮನ ವರಾಹಾವತಾರ ಕಾಲದಲ್ಲಿ ಭೂದೇವಿಯಲ್ಲಿ ಜನಿಸಿದ್ದ.  (ಪಂಚ ಭೂತಾಭಿಮಾನಿಗಳಲ್ಲಿ ಕೊನೆಯವಳು ಭೂದೇವಿ. ಸಾಕ್ಷಾತ್ ಲಕ್ಷ್ಮೀ ಅಲ್ಲ.)  ಮೂಲಪ್ರಕೃತಿಯಾದ ಮಹಾಲಕ್ಷ್ಮಿಯ ಭೂರೂಪದ ಆವೇಶ ಭೂದೇವಿಯಲ್ಲಿತ್ತು.  ಅವನು ಪ್ರಾಗ್ಜೋತಿಷಪುರದ ರಾಜನಾಗಿದ್ದ.  ಭೂದೇವಿಯ ಸುತನಾದ್ದರಿಂದ ಇವನನ್ನು ಭೌಮಾಸುರ ಎನ್ನುತ್ತಿದ್ದರು.  ನರಕಾಸುರನ ಬಳಿ ವೈಷ್ಣವಾಸ್ತ್ರ ಇತ್ತು, ಮತ್ತು ಅವನಿಗೆ ಬ್ರಹ್ಮದೇವರಿಂದ ಅವಧ್ಯತ್ವ ವರವಿದ್ದಿತು. ಆದ್ದರಿಂದ ಅವನನ್ನು ಯಾರೂ ಸೋಲಿಸಲಾಗುತ್ತಿರಲಿಲ್ಲ.  ದೇವ ಮಾತೆಯಾದ ಅದಿತಿಯ ಕುಂಡಲಿಗಳನ್ನು ಅಪಹರಿಸಿದ್ದ.    ಅವನು ಎಲ್ಲಾ ಪ್ರಸಿದ್ಧ ರಾಜರುಗಳನ್ನೂ ಸೋಲಿಸಿ  ಅವರ ಎಲ್ಲಾ ಪುತ್ರಿಯರನ್ನೂ ಅಪಹರಿಸಿದ್ದ.    ಹೀಗೆ ಅಪಹರಿಸಿದ್ದ ರಾಜಕುಮಾರಿಯರ‌ ಸಂಖ್ಯೆ16100.   ಈ ಎಲ್ಲಾ ರಾಜಕುಮಾರಿಯರೂ ಮೂಲತಃ: ಅಗ್ನಿಪುತ್ರರಾಗಿದ್ದು   ಸ್ತ್ರೀತ್ವ ಪಡೆದು ಕೃಷ್ಣನ ಮಡದಿಯರಾಗಬೇಕೆಂದು ತಪಸ್ಸು ಮಾಡಿ ಜನಿಸಿದ್ದರು.  ಈ ಎಲ್ಲಾ ರಾಜಕುಮಾರಿಯರೂ ನರಕಾಸುರನ ಬಂಧನದಲ್ಲಿದ್ದರು.  ಒಮ್ಮೆ ನಾರದರು ಇವರನ್ನು ಭೇಟಿಯಾಗಿ ಅತ್ಯಂತ ನಿಷ್ಠೆಯಿಂದ ಲಕ್ಷ್ಮೀ ವ್ರತ ಮಾಡಲು ಹೇಳಿದರು.  ಅದರಂತೆ ಸಂಪೂರ್ಣ ಇಂದ್ರಿಯ ನಿಗ್ರಹವುಳ್ಳವರಾಗಿ ವ್ರತವನ್ನು ಮಾಡಿದರು.  ವಾಯು ದೇವರು ಇವರ ತಪಸ್ಸಿಗೆ ಮೆಚ್ಚಿ ಶ್ರೀ ಕೃಷ್ಣನೇ ಪತಿಯಾಗುತ್ತಾನೆಂದು ಹೇಳಿದ್ದರು.

 ನರಕಾಸುರನ ಸಂಹಾರ , Story of Deepawali Naraka Chaturdashi


ಒಮ್ಮೆ ನಾರದರು  ಕೃಷ್ಣನ  ಹಿರಿಮಡದಿ ರುಕ್ಮಿಣೀದೇವಿಗೆ ಪಾರಿಜಾತ ಪುಷ್ಪವನ್ನು ನೀಡಿ ಶ್ರೀ ಕೃಷ್ಣ ಮತ್ತು ರುಕ್ಮಣಿಯರ ಮಹಿಮೆಯನ್ನು ಪ್ರಶಂಸಿದರು.  ಇದನ್ನು ನೋಡಿದ ಸತ್ಯಭಾಮೆ ತನ್ನನ್ನು ಹೊಗಳಲಿಲ್ಲ ಎಂದು ಕುಪಿತಳಾದಳು.   ಇದನ್ನು ಗಮನಿಸಿದ ಶ್ರೀ ಕೃಷ್ಣನು ನಿನಗೆ ಇಂದ್ರ ಲೋಕದಿಂದ ಪಾರಿಜಾತ ವೃಕ್ಷವನ್ನೇ ತಂದು ಕೊಡುತ್ತೇನೆ ಎಂದನು.  ಇಲ್ಲಿ ರುಕ್ಮಿಣಿ ಮತ್ತು ಸತ್ಯಭಾಮೆ ಇಬ್ಬರೂ ಸಾಕ್ಷಾತ್ ಲಕ್ಷ್ಮೀದೇವಿಯ ಶ್ರೀ ಮತ್ತು ಭೂ ರೂಪಗಳೇ.  ಅವರಿಬ್ಬರಿಗೂ ಯಾವುದೇ ವ್ಯತ್ಯಾಸವಿಲ್ಲ.  ಆದರೂ ಭೂಲೋಕದಲ್ಲಿ ಅವತಾರ ಮಾಡಿದುದರಿಂದ ಸವತಿ ಮತ್ಸರ ತೋರಿದ್ದಾರೆ ಎಂಬುದನ್ನು ಗಮನಿಸಬೇಕು.

ಇದೇ ಸಂದರ್ಭದಲ್ಲಿ ನರಕಾಸುರನಿಂದ ದೇವೇಂದ್ರನು ಪರಾಜಿತನಾಗಿ, ಎಲ್ಲಾ ದೇವತೆಗಳಿಂದ ಋಷಿಮುನಿ ಗಳಿಂದಲೂ ಕೂಡಿ ಕೃಷ್ಣನ ಸಹಾಯ ಕೋರಿದರು.   ಕೃಷ್ಣನು ಸತ್ಯಭಾಮಾ ಸಹಿತನಾಗಿ ಗರುಡನ ಏರಿ ಪ್ರಾಗ್ಜ್ಯೋತಿಷಪುರವನ್ನು ತಲುಪಿ , ಅಲ್ಲಿ ಇದ್ದ ಎಲ್ಲಾ ದುರ್ಗಗಳನ್ನೂ ಭೇದಿಸಿ, ಐದು ಮುಖದ ಮುರಾಸುರನ ಸಂಹರಿಸಿ, ಮುರಾರಿ ಎನಿಸಿದನು.  ಆಗ ನರಕಾಸುರ ತನ್ನ  30 ಅಕ್ಷೋಹಿಣಿ ಸೈನ್ಯ ಸಮೇತನಾಗಿ ಯುದ್ಧಕ್ಕೆ ಬಂದು, ಬ್ರಹ್ಮದೇವರು ನೀಡಿದ್ದ ಶತಘ್ನಿ ಎಂಬ ಗದೆಯನ್ನು ಕೃಷ್ಣನ ಮೇಲೆ ಎಸೆಯಲು, ತಾನು ಸ್ವತಃ ಅಭೇದ್ಯ, ಅಚ್ಚೇಧ್ಯನಾದರೂ ಅಪ್ರಾಕೃತ ಶರೀರಿಯಾದರೂ, ಆ ಗದಾ ಪ್ರಹಾರದಿಂದ  ಶ್ರಮಗೊಂಡವನಂತೆ ನಟಿಸುತ್ತ ಮೂರ್ಛಿತನಾದನು.  ಆಗ ಸತ್ಯಭಾಮೆಯು ಕೃಷ್ಣನ ಶಾಂಜ್ಞ ಬಿಲ್ಲನ್ನು ಹಿಡಿದು ನರಕಾಸುರನ ಸೋಲಿಸಿದಳು. (ಇಲ್ಲಿ ಲಕ್ಷ್ಮೀದೇವಿಯ ಭೂರೂಪದ ಆವಿಷ್ಟ ರೂಪದ ಮಗ ನರಕಾಸುರ ಮತ್ತು ಸಾಕ್ಷಾತ್ ಲಕ್ಷ್ಮೀ ದೇವಿಯ ಭೂರೂಪದ ಅವತಾರಳಾದ ಸತ್ಯಭಾಮೆಯಿಂದಲೇ ಪರಾಜಿತನಾದ ನರಕಾಸುರ ಎಂಬುದು ಗಮನಾರ್ಹ). ನಂತರ ಕೃಷ್ಣ ಪರಮಾತ್ಮ ಮೇಲೆದ್ದು ತನ್ನ ಸುದರ್ಶನ ಚಕ್ರದಿಂದ ನರಕಾಸುರನ ಶಿರಸ್ಸು ಛೇದಿಸಿದನು.  ನಂತರ ಕೃಷ್ಣ ಸತ್ಯಭಾಮೆಯೊಂದಿಗೆ ನರಕಾಸುರನ ಅಂತ:ಪುರ ಪ್ರವೇಶಿಸಿ ಅಲ್ಲಿ ನರಕಾಸುರನ ತಾಯಿ ಭೂದೇವಿಯಿಂದ ಅದಿತಿಯ ಕುಂಡಲಗಳನ್ನು ಪಡೆದು, ಇಂದ್ರನಿಗಿತ್ತು, ನರಕಾಸುರನ ಪುತ್ರ ಭಗದತ್ತನನ್ನು ರಾಜನಾಗಿ ನೇಮಿಸಿದನು.  ನರಕಾಸುರನಿಂದ ಬಂಧಿತ ೧೬೧೦೦ ರಾಜಕುವರಿಯರನ್ನೂ ಬಂಧ ವಿಮೋಚನೆಗೊಳಿಸಿದನು.  ಶ್ರೀಕೃಷ್ಣ ಭಗದತ್ತನಿಗೆ ಆದೇಶಿಸುತ್ತಾನೆ – ” ಈ ಎಲ್ಲಾ ರಾಜಕುವರಿಯರಿಗೂ ಅಭ್ಯಂಜನ ಸ್ನಾನ ಮಾಡಿಸಿ, ಶ್ರೇಷ್ಠ ಉಡುಗೆ ತೊಡುಗೆ ಕೊಟ್ಟು ಕಳುಹಿಸು”. ಆಗ ಭೂದೇವಿ ತನ್ನ ಮಗ ನರಕಾಸುರನ ಕೊಂದ ರಾಜಕುಮಾರಿಯನ್ನು ವಿಮೋಚನೆ ಮಾಡಿಸಿದ ನೆನಪಿಗಾಗಿ ಈ ದಿನವನ್ನು ಹಬ್ಬವನ್ನಾಗಿ ಆಚರಿಸಬೇಕೆಂದು ಕೋರಿದಳು

- ನರಹರಿ ಸುಮಧ್ವ , ಸುಮಧ್ವ ಸೇವಾ

–>