-->

List and Importance of Sanskars for a new born child

ಮಗು ಜನಿಸಿದ ನಂತರ ಆಚರಿಸಲಾಗುವ ಸಂಸ್ಕಾರಗಳಾವುವು..? ಇದರ ಮಹತ್ವವೇನು..?

ಹಿಂದೂ ಧರ್ಮದಲ್ಲಿ ಮಗು ಜನಿಸಿದ ನಂತರ ಕೆಲವೊಂದು ಆಚರಣೆಗಳನ್ನು ಅಥವಾ ಸಂಸ್ಕಾರವನ್ನು ಆಚರಿಸಲಾಗುತ್ತದೆ. ಈ ಪ್ರತಿಯೊಂದು ಆಚರಣೆಯು ತನ್ನದೇ ಆದ ಮಹತ್ವವನ್ನು ಹೊಂದಿದೆ. ಮಗು ಜನಿಸಿದ ನಂತರ ಆಚರಿಸಲಾಗುವ ಸಂಸ್ಕಾರಗಳು ಯಾವುವು ಗೊತ್ತಾ..? ಇದರ ಮಹತ್ವವೇನು ಗೊತ್ತಾ..?

ಜನನ ಎನ್ನುವುದು ಸೃಷ್ಟಿಯ ಸುಂದರ ಹಾಗೂ ಅದ್ಭುತ ಪ್ರಕ್ರಿಯೆ. ಯಾವುದೇ ಒಂದು ಮನೆಯಲ್ಲಿ ಮಗು ಜನಿಸಿದಾಗ ಅದನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ಒಂದು ಮಗು ಕುಟುಂಬದಲ್ಲಿ ಜನಿಸಿತೆಂದರೆ ಆ ಕುಟುಂಬದಲ್ಲಿ ಮಿತಿಮೀರಿದ ಸಂತೋಷವಿರುತ್ತದೆ. ತಮ್ಮ ಕುಟುಂಬಕ್ಕೆ ಇನ್ನೊಂದು ಹೊಸ ಸದಸ್ಯರೊಬ್ಬರು ಸೇರಿದರೆಂಬ ಹೆಮ್ಮೆ ಹುಟ್ಟುತ್ತದೆ. ಹಿಂದೂ ಧರ್ಮದ ಕುಟುಂಬವೊಂದರಲ್ಲಿ ಮಗುವೊಂದು ಜನಿಸಿದಾಗ ಆ ಕುಟುಂಬದಲ್ಲಿ ಅನೇಕ ಆಚರಣೆಗಳನ್ನು ಅಥವಾ ಸಂಸ್ಕಾರಗಳನ್ನು ಆಚರಿಸಲಾಗುತ್ತದೆ. ಮಗು ಜನಿಸಿದಾಗ ಯಾವೆಲ್ಲಾ ಆಚರಣೆಯನ್ನು ಅಥವಾ ಸಂಸ್ಕಾರಗಳನ್ನು ಮಾಡಲಾಗುತ್ತದೆ ನೋಡಿ:
 

ಶಿಶುವಿಗೆ ನವವಸ್ತ್ರ ಧಾರಣೆ ‌ ‌ 

ಸಾಮಾನ್ಯವಾಗಿ ಮಗು ಹುಟ್ಟಿದ ದಿನದಿಂದ ಮಗುವಿಗೆ ಹೊಸ ಬಟ್ಟೆಯನ್ನು ಹಾಕುವ ವಾಡಿಕೆ ಇಲ್ಲ. ಬದಲಿಗೆ ಯಾವುದಾದರೂ ಮಗುವಿಗೆ ಬಳಸಿದ ಬಟ್ಟೆಯನ್ನು ಧರಿಸುತ್ತಾರೆ. ಮೊದಲನೆಯ ಬಾರಿಗೆ ಹೊಸ ವಸ್ತ್ರವನ್ನು ಧಾರಣೆ ಮಾಡುವಾಗ ಶುಭ ಸಮಯದಲ್ಲಿ ಮಾಡುವುದು ಉತ್ತಮ. ತೊಟ್ಟಿಲು ತೂಗಿಸುವುದು ‌  ಮಗು ಹುಟ್ಟಿದ ನಂತರ ತೊಟ್ಟಿಲಿನಲ್ಲಿ ಹಾಸಿಗೆ, ತಲೆಯ ಕೆಳಗೆ ಬಟ್ಟೆಯ ಸಿಂಬೆ ಹಾಕಿ, ತೂಗುತ್ತಾ ಮಲಗಿಸಿದರೆ ಮಗುವಿನ ತಲೆ ಆಕಾರ ಸರಿ ಹೊಂದುತ್ತದೆ ಮತ್ತು ಮಗು ಆರಾಮವಾಗಿ ಮಲಗಿ ನಿದ್ರಿಸುತ್ತದೆ. ಮಗು ಜನಿಸಿದ 1, 3, 5ನೇ ತಿಂಗಳಿನಲ್ಲಿ ತೊಟ್ಟಿಲಿನಲ್ಲಿ ಹಾಕುವ ಶಾಸ್ತ್ರ ಮಾಡುವುದು ಶುಭ.; ​

ಜಾತಕರ್ಮ

ಜಾತ ಎಂದರೆ ಮೂಲ ಅಥವಾ ಅಸ್ಥಿತ್ವಕ್ಕೆ ತರುವುದು ಮತ್ತು ಕರ್ಮ ಎಂದರೆ ಕ್ರಿಯೆ ಅಥವಾ ಚಟುವಟಿಕೆ ಎಂದರ್ಥ. ಜಾತಕರ್ಮ ಆಚರಣೆಯು ಮಗುವಿನ ಜನನದ ವಿಧಿಯನ್ನು ಉಲ್ಲೇಖಿಸುತ್ತದೆ. ಬೃಹದಾರಣ್ಯಕ ಉಪನಿಷತ್ತಿನ 6.4.24 ರಿಂದ 6.4.27 ರ ವಚನಗಳಲ್ಲಿ ಈ ವಿಧಿಯನ್ನು ವಿವರಿಸಲಾಗಿದೆ. ಮಗು ಭ್ರೂಣದಲ್ಲಿದ್ದಾಗ ಕೂಡ ಆ ಮಗು ಕೆಲವೊಂದು ದೋಷಗಳನ್ನು ಹೊಂದಿರುತ್ತದೆ. ಹಾಗಾಗಿ ಆ ದೋಷಗಳನ್ನು ನಿವಾರಿಸಲು, ಆ ಮಗುವಿನ ಪೂರ್ವ ಜನ್ಮದ ಪಾಪಗಳನ್ನು ತೊಡೆದು ಹಾಕಲು ಈ ಆಚರಣೆಯನ್ನು ಮಾಡಲಾಗುತ್ತದೆ. ಈ ಆಚರಣೆಯನ್ನು ಮಗು ಜನಿಸಿದ ಒಂದು ವಾರದೊಳಗೆ ಅಥವಾ ಕೆಲವೊಮ್ಮೆ 10 ನೇ ದಿನದಂದು ಮಾಡಲಾಗುತ್ತದೆ. ಮಗುವಿನ ತಂದೆಯು ಮಗುವಿನ ತುಟಿಗೆ ಜೇನುತುಪ್ಪವನ್ನು ಅಥವಾ ತುಪ್ಪವನ್ನು ಸ್ಪರ್ಶಿಸುವುದರ ಮೂಲಕ ಮಗುವನ್ನು ಸ್ವಾಗತಿಸಲಾಗುತ್ತದೆ. ಆ ದಿನದಂದು ಮಂತ್ರಗಳನ್ನು, ಸ್ತೋತ್ರಗಳನ್ನು ಹಾಗೂ ಹೋಮ - ಹವನಾದಿಗಳನ್ನು ಹಮ್ಮಿಕೊಳ್ಳಲಾಗುತ್ತದೆ.

List and Importance of Sanskars for a new born child


​ನಾಮಕರಣ

ಮಗುವಿನ ಆಯಸ್ಸನ್ನು ವೃದ್ಧಿಸಲು, ಮಗುವಿನ ದೀರ್ಘಾಯುಷ್ಯಕ್ಕಾಗಿ ಈ ಆಚರಣೆಯನ್ನು ಹಮ್ಮಿಕೊಳ್ಳಲಾಗುತ್ತದೆ. ಮಗು ಜನಿಸಿದ ಹತ್ತನೇ ದಿನದಂದು ಅಥವಾ ಹನ್ನೆರಡನೇ ದಿನದಂದು ಈ ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ. ಪೂಜೆಯ ದಿನದಂದು ಜನಿಸಿದ ಮಗುವಿಗೆ ಸ್ನಾನ ಮಾಡಿಸಿ, ಹೊಸ ಬಟ್ಟೆಯನ್ನು ಧರಿಸುತ್ತಾರೆ. ಆಗ ಮನೆಯಲ್ಲಿ ನಿಶ್ಚಯಿಸಿರುವ ಹೆಸರನ್ನು ಆ ಮಗುವಿಗೆ ಇಡಲಾಗುತ್ತದೆ. ಈ ಸಮಾರಂಭದಲ್ಲಿ ಕೇವಲ ಮನೆಯವರು ಮಾತ್ರ ಇರುವುದಿಲ್ಲ, ಬದಲಾಗಿ ಕುಟುಂಬದ ಸದಸ್ಯರು, ಸ್ನೇಹಿತರು, ಬಂಧುಗಳು, ಹಿರಿಯರು ಸೇರಿದಂತೆ ಅನೇಕರು ಪಾಲ್ಗೊಳ್ಳುತ್ತಾರೆ.

​ನಿಷ್ಕೃಮಣ

ಹುಟ್ಟಿದ ಮಗುವಿಗೆ ಸಂಪತ್ತು, ಯಶಸ್ಸು ಮತ್ತು ಗೌರವವನ್ನು ತರಲು ಈ ಆಚರಣೆಯನ್ನು ಮಾಡಲಾಗುತ್ತದೆ. ಅಷ್ಟು ಮಾತ್ರವಲ್ಲ, ಈ ಆಚರಣೆಯನ್ನು ಮಾಡುವುದರಿಂದ ಮಗುವಿನ ಆಯಸ್ಸು ವೃದ್ಧಿಯಾಗುತ್ತದೆ ಹಾಗೂ ಜೀವನವು ಸರಳವಾಗಿರುತ್ತದೆ ಎನ್ನುವ ನಂಬಿಕೆಯಿದೆ. ಈ ಆಚರಣೆಯನ್ನು ಮಗು ಜನಿಸಿದ ಮೂರು ತಿಂಗಳ ನಂತರ ಜನಿಸಿದ ದಿನಾಂಕದಂದೇ ಆಚರಿಸಲಾಗುತ್ತದೆ. ಈ ದಿನದಂದು ಮಗುವಿಗೆ ಬೆಂಕಿಯನ್ನು, ಹಸುವನ್ನು ಮತ್ತು ಚಂದ್ರನನ್ನು ತೋರಿಸುತ್ತಾರೆ. ಈ ಆಚರಣೆಯಲ್ಲಿ ಮನೆಯ ದೇವರನ್ನು ಅಥವಾ ಇಷ್ಟದ ದೇವರನ್ನು ಪೂಜಿಸಲಾಗುತ್ತದೆ ಹಾಗೂ ಆ ದೇವರಿಗೆ ಶ್ರೀಗಂಧದ, ಅಕ್ಕಿಯನ್ನು ಮತ್ತು ಹೂವನ್ನು ಅರ್ಪಿಸಲಾಗುತ್ತದೆ. ಮಂತ್ರಗಳನ್ನು ಪಠಿಸಲಾಗುತ್ತದೆ. ಹಾಗೂ ಶಿವನನ್ನು ಕೂಡ ಆರಾಧಿಸಿ ಆತನಿಗೆ ಪ್ರಿಯವಾದ ವಸ್ತುಗಳನ್ನು ಅರ್ಪಿಸಲಾಗುತ್ತದೆ.

​ಅನ್ನಪ್ರಾಶನ

ಹುಟ್ಟಿದ ಮಗುವಿನ ಉತ್ತಮ ಆರೋಗ್ಯಕ್ಕಾಗಿ ಹಾಗೂ ಉತ್ತಮ ಜೀವನಶೈಲಿಗಾಗಿ ಈ ಆಚರಣೆಯನ್ನು ಆಚರಿಸಲಾಗುತ್ತದೆ. ಈ ಆಚರಣೆಯ ಮುಖ್ಯ ಅಂಶವೆಂದರೆ ಈ ಶುಭ ಸಂದರ್ಭದಲ್ಲಿ ಮಗುವಿಗೆ ಹಾಲಿನ ಹೊರತಾಗಿ ಅದರ ಮೊದಲ ಆಹಾರವನ್ನು ನೀಡಲಾಗುತ್ತದೆ. ಮಗು ಗಂಡಾದರೆ ಈ ಆಚರಣೆಯನ್ನು ಮಗು ಹುಟ್ಟಿದ 6 ನೇ ಅಥವಾ 8 ನೇ ತಿಂಗಳಿನಲ್ಲಿ ಆಚರಿಸಲಾಗುತ್ತದೆ ಹಾಗೂ ಹೆಣ್ಣು ಮಗುವಾದರೆ ಮಗು ಜನಿಸಿದ ಐದನೆ ಅಥವಾ ಯಾವುದೇ ಬೆಸ ಸಂಖ್ಯೆಯ ತಿಂಗಳಿನಲ್ಲಿ ಆಚರಿಸಲಾಗುತ್ತದೆ. ಈ ದಿನ ಮಗುವಿಗೆ ಅನ್ನದೊಂದಿಗೆ ಮೊಸರು ಅಥವಾ ತುಪ್ಪ ಅಥವಾ ಜೇನುತುಪ್ಪದೊಂದಿಗೆ ಬೆರೆಸಿ ಚಿನ್ನ ಅಥವಾ ಕಂಚಿನ ಪಾತ್ರೆಯಲ್ಲಿ ತಿನ್ನಿಸಲಾಗುತ್ತದೆ. ಈ ಸಂದರ್ಭದಲ್ಲಿ ಮಂತ್ರಗಳನ್ನು ಪಠಿಸಲಾಗುತ್ತದೆ ಹಾಗೂ ಮಗುವಿಗೆ ಮೊದಲ ತುತ್ತು ತಿನ್ನಿಸಿದ ನಂತರ ನೆಲದ ಮೇಲೆ ಬಿಡಲಾಗುತ್ತದೆ. ಈ ಆಚರಣೆಯಾದ ನಂತರವೇ ಮಗುವಿಗೆ ಅನ್ನದಿಂದ ತಯಾರಿಸಿದ ಆಹಾರವನ್ನು ನೀಡಲಾಗುತ್ತದೆ.

ಚೂಡಾಕರಣ ಅಥವಾ ಮುಂಡನ
 ಚೂಡಾಕರಣ ಅಥವಾ ಮುಂಡನವೆಂದರೆ ಮಗುವಿಗೆ ಮಾಡಿಸುವ ಮೊದಲ ಕ್ಷೌರವಾಗಿದೆ. ಈ ಸಂಸ್ಕಾರವನ್ನು ಮಗು ಜನಿಸಿದ ಮೊದಲ ವರ್ಷದ ಕೊನೆಗೆ ಅಥವಾ ಮೂರನೇ ವರ್ಷದ ಮುಕ್ತಾಯಕ್ಕೂ ಮುಂಚೆ ನಡೆಸಲಾಗುತ್ತದೆ. ಒಂದು ವೇಳೆ ಈ ಎರಡು ವರ್ಷದಲ್ಲಿ ಮಾಡಿಸದಿದ್ದರೆ ಅದನ್ನು 5ನೇ, 7 ನೇ ವರ್ಷಕ್ಕೆ ಮಾಡಿಸಬೇಕಾಗುತ್ತದೆ. ಕೂದಲು ತೆಗೆಯುವ ಮಗುವಿನ ತಲೆ ಮೇಲೆ ಸ್ವಲ್ಪ ಕೂದಲನ್ನು ಹಾಗೇ ಇಡಲಾಗುತ್ತದೆ. ಬ್ರಹ್ಮಾಂಡದ ಸಕಾರಾತ್ಮಕ ಶಕ್ತಿಯನ್ನು ಸೆಳೆಯಲು ಈ ಕೂದಲನ್ನು ಇಡಲಾಗುತ್ತದೆ. ಈ ಸಂಸ್ಕಾರವನ್ನು ಮಗುವಿನ ದೀರ್ಘಾಯುಷ್ಯಕ್ಕಾಗಿ, ಶಕ್ತಿಗಾಗಿ ಹಾಗೂ ಸೌಂದರ್ಯವನ್ನು ಪಡೆಯಲು ಆಚರಿಸಲಾಗುತ್ತದೆ.

​ಕರ್ಣವೇದ
 ಒಳ್ಳೆಯ ಶಬ್ಧಗಳನ್ನು ಕೇಳಲು ಈ ಶಾಸ್ತ್ರವನ್ನು ಮಾಡಲಾಗುತ್ತದೆ. ಈ ಆಚರಣೆಯು ಎಲ್ಲಾ ಪಾಪಗಳಿಂದ ಮುಕ್ತಗೊಳಿಸುತ್ತದೆ ಹಾಗೂ ಆ ಮಗುವಿಗೆ ಚೈತನ್ಯವನ್ನು ನೀಡುತ್ತದೆ. ಇದು ಕಿವಿ ಚುಚ್ಚುವ ಸಮಾರಂಭವಾಗಿದ್ದು, ಮಗು ಹುಟ್ಟಿದ 6, 7, 8ನೇ ತಿಂಗಳು‌ ಇಲ್ಲವೇ ಮೂರನೇ ಅಥವಾ ಐದನೇ ವರ್ಷದಲ್ಲಿ ಆಚರಿಸಲಾಗುತ್ತದೆ. ನಂತರ ವರ್ಷದಲ್ಲೂ ಇದನ್ನು ಆಚರಿಸಬಹುದು

–>