-->

ರಕ್ತ ಸಂಬಂಧ ಮೀರಿದ ರಕ್ಷಾಬಂಧನ

ಸುಮಾರು 6,000 ವರ್ಷಗಳ ಇತಿಹಾಸವಿರುವ ಅತಿ ಪ್ರಮುಖವಾದ ಹಬ್ಬ ರಕ್ಷಾಬಂಧನ. ರಾಖಿ ಎಂದರೆ ಕೇವಲ ಸಹೋದರ ಸಹೋದರಿಯರಿಗೆ ಮಾತ್ರ ಸೀಮಿತವಾದದ್ದು ಅಲ್ಲ.ಮೊದಲಿಗೆ ಈ ಹಬ್ಬದಲ್ಲಿ ಗುರುಗಳು ತಮ್ಮ ಶಿಷ್ಯರಿಗೆ  ರಾಖಿ ಕಟ್ಟಿ ದೀರ್ಘಕಾಲದ ಆಯುಷ್ಯ ತಮ್ಮ ಕೈಯಲ್ಲಿ ಕಲಿತಿರುವ ಶಿಷ್ಯರಿಗೆ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತಿದ್ದರು. 1905 ರಲ್ಲಿ ಬ್ರಿಟಿಷರು  ಬಂಗಾಳವನ್ನು ವಿಭಜಿಸಿದಾಗ ಹಿಂದೂ ಮುಸ್ಲಿಮರಲ್ಲಿ ಏಕತೆ ತರಲು ಶ್ರೀ ರವೀಂದ್ರನಾಥ ಟ್ಯಾಗೋರ್ ಅವರು ಪರಸ್ಪರ ಪ್ರತಿಯೊಬ್ಬರು ರಾಖಿ ಕಟ್ಟಿಕೊಳ್ಳೋಣ ಎಂಬ ಕರೆ ನೀಡಿದರು. ಅಂದಿನಿಂದ ಇದು ಏಕತೆಯ ಹಬ್ಬ ಕೂಡ ಆಯಿತು.
       
ರಾಖಿ ಯಾವುದ್ದಾದರೇನು, ಅದನ್ನು ಕಟ್ಟುವ ಮನಸ್ಸು ಬಹಳ ನಿಷ್ಕಲ್ಮಶವಾಗಿರಬೇಕು. ರಾಖಿ ಚಿನ್ನದ್ದಾಗಲಿ ಅಥವಾ ನೂಲಿನ ದಾರದ್ದಾಗಲಿ ಅದನ್ನು ಕಟ್ಟುವ ಮತ್ತು ಕಟ್ಟಿಸಿಕೊಳ್ಳುವ ಮನಸ್ಸು ಬಂಗಾರವಾಗಿರಬೇಕು ಅಷ್ಟೇ. 2023 ರಲ್ಲಿ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ 23 ಅಡಿ ಉದ್ದದ ಬೃಹತ್ ರಾಖಿಯನ್ನು ತಯಾರಿಸಿದ್ದು, ಅದು ವಿಶ್ವದ ಅತಿ ದೊಡ್ಡ ರಾಖಿಯಾಗಿ ಪ್ರಸಿದ್ಧಿಯಾಯಿತು. ಪುರಾಣದ ಪ್ರಕಾರ ದ್ರೌಪದಿ ಕೃಷ್ಣನಿಗೆ ಸೀರೆಯ ತುಂಡನ್ನು ಕಟ್ಟಿದಾಗ ಕೃಷ್ಣನು ಅವಳಿಗೆ ಅಕ್ಷಯ ವಸ್ತ್ರ ನೀಡಿ ವಸ್ತ್ರಪಹರಣದ ಸಮಯದಲ್ಲಿ ರಕ್ಷಿಸಿದನು, ಇದು ಶ್ರೀಕೃಷ್ಣನು ದ್ರೌಪದಿಗೆ ನೀಡಿದ ಮೊದಲ ಉಡುಗೊರೆಯಾಗಿದೆ. ಅಂದಿನಿಂದ ಇಂದಿನವರೆಗೂ ರಾಖಿ ಕಟ್ಟಿದ ಸಹೋದರಿಗೆ ಸಹೋದರನು ತನ್ನ ಕೈಲಾದ ಏನಾದರೂ ಒಂದು ಉಡುಗೊರೆ ನೀಡಿ, ಉಸಿರಿನ ಕೊನೆಯ ಕ್ಷಣದವರೆಗೂ ನಿನಗೆ ನಾನು ರಕ್ಷಕನಾಗಿ ಸದಾ ಇರುತ್ತೇನೆ ಎಂಬ ಧೈರ್ಯ ನೀಡುವುದೇ ರಾಖಿ ಹಬ್ಬದ ಪ್ರಮುಖ ಅಂಶವಾಗಿದೆ. ಹಳದಿ ಬಣ್ಣದ ರಾಖಿಯು ಸಮೃದ್ಧಿ ಮತ್ತು ಜ್ಞಾನದ ಸಂಕೇತವಾದರೆ, ಕೆಂಪು ಬಣ್ಣದ ರಾಖಿಯು ಶಕ್ತಿ ಮತ್ತು ಪ್ರೀತಿಯ ಸಂಕೇತವಾಗಿದೆ. ಬಿಳಿ ಬಣ್ಣದ ರಾಖಿಯು ಶಾಂತಿ ಮತ್ತು ಪವಿತ್ರತೆಯ ಸಂಕೇತವಾದರೆ, ನೀಲಿ ಬಣ್ಣದ ರಾಖಿಯು ತಾಳ್ಮೆಯ ಸಂಕೇತವಾಗಿದೆ.
    
ಇತ್ತೀಚಿನ ದಿನಮಾನಗಳಲ್ಲಿ ಬೀಜ ಇರುವ ರಾಖಿ ಬಹಳ ಹೆಚ್ಚಾಗಿದೆ ಕಾರಣ ರಾಖಿ ಹಬ್ಬದ ನಂತರ ಆ ರಾಖಿಯನ್ನು ಮಣ್ಣಿನಲ್ಲಿ ಹಾಕಿದರೆ ಅದು ಗಿಡವಾಗಿ ಬೆಳೆಯುತ್ತದೆ. ಆ ಗಿಡ ಅಣ್ಣ ತಂಗಿಯರ ಬಾಂಧವ್ಯವನ್ನು ಸದಾ ಕಾಲ ನೆನಪು ಉಳಿಯುವಂತೆ ಮಾಡುತ್ತದೆ. ರಾಖಿ ಕಟ್ಟುವುದು ಒಂದು ನಿಮಿಷದ ಕೆಲಸ ಆದರೆ ಆ ದಾರದಲ್ಲಿ ನಂಬಿಕೆ ಇರುವುದು ಜೀವನಪೂರ್ತಿ. ಸಹೋದರಿಯರಿಗೆ ಸಹೋದರ ಒಬ್ಬ ಇದ್ದರೆ ಸಾಕು ಅದು ನೂರು ಆನೆಯ ಬಲಕ್ಕೆ ಸಮ ಎಂದು ಸಹೋದರಿಯರು ನಂಬಿರುತ್ತಾರೆ. ರಾಖಿ ಕಟ್ಟುವಾಗ ಮೂರು ಗಂಟನ್ನು ಹಾಕಲಾಗುತ್ತದೆ ಅದರ ಅರ್ಥ ಬ್ರಹ್ಮ ವಿಷ್ಣು ಮಹೇಶ್ವರ ಅಥವಾ ಮನಸಾ ವಾಚಾ ಕರ್ಮಣಾ ಶುದ್ದಿಯಿಂದ ರಕ್ಷಿಸುತ್ತೇನೆ ಎಂಬುದರ ಸಂಕೇತವಾಗಿದೆ.
    
ರಾಖಿ ಕಟ್ಟುವುದರ ಹಿಂದೆ ಸ್ವಲ್ಪ ವಿಜ್ಞಾನವು ಅಡಗಿದೆ. ಕೈಯಲ್ಲಿಯ ಮಣಿಕಟ್ಟಿನ ಮೇಲೆ ರಾಖಿ ಕಟ್ಟುವುದರಿಂದ ಆಕ್ಯುಪ್ರೆಶರ್ ಪಾಯಿಂಟ್ ಒತ್ತಡಕ್ಕೂಳಗಾಗುತ್ತದೆ. ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಒಂದು ಅರ್ಥದಲ್ಲಿ ಆರೋಗ್ಯಕ್ಕೂ ಕೂಡ ರಾಖಿ ಬಹಳ ಉಪಯೋಗವಾಗುತ್ತದೆ ಎಂಬುದು ಮೇಲಿನ ಅಂಶದಿಂದ ತಿಳಿದು ಬರುತ್ತದೆ.
    

Rakhi , festival beyond blood relations

ನಾವು ಆಚರಣೆ ಮಾಡುವ ಹಲವಾರು ಹಬ್ಬಗಳಲ್ಲಿ ಈ ಹಬ್ಬವು ಒಂದು ವಿಶೇಷವಾದ ಮಮತೆ ಪ್ರೀತಿ ಕರುಣೆ ಎಲ್ಲವನ್ನ ತೋರ್ಪಡಿಸುವ ಹಬ್ಬವಾಗಿದೆ. ಈ ರಾಖಿ ಹಬ್ಬಕ್ಕಾಗಿ ಎಷ್ಟೋ ಜನ ಸಹೋದರಿಯರು  ತುದಿಗಾಲಿನಲ್ಲಿ ಈ ದಿನಕ್ಕಾಗಿ ಕಾಯುತ್ತಿರುತ್ತಾರೆ. ಸಹೋದರರು ಕೂಡ ಹಾಗೆಯೇ ರಕ್ಷಾಬಂಧನಕ್ಕೆ ಸಹೋದರಿ ನಮ್ಮ ತವರು ಮನೆಗೆ ಬರುತ್ತಾಳೆ,ರಾಖಿಯನ್ನು ಕಟ್ಟುತ್ತಾಳೆ ಅವಳಿಗೆ ಏನಾದರೂ ಒಂದು ಉಡುಗೊರೆ ಕೊಡಲೇಬೇಕು ಎಂಬ ಕಾತುರದಿಂದ ಸಹೋದರಿಯ ದಾರಿಗಾಗಿ ಕಾಯುತ್ತಿರುತ್ತಾರೆ. ಆ ಕಾಯುವ ಕ್ಷಣದಲ್ಲಿ ಪ್ರೀತಿ ಮಮತೆ ಬೆಟ್ಟದಷ್ಟು ಹೆಚ್ಚಾಗಿರುತ್ತದೆ.ರಾಖಿ ಕಟ್ಟಲು ರಕ್ತ ಸಂಬಂಧಿಕರೇ ಬೇಕಾಗಿಲ್ಲ, ಮನಸ್ಸಿನ ಭಾವನೆಯನ್ನು ಹಂಚಿಕೊಳ್ಳುವ ಯಾವುದೇ ವ್ಯಕ್ತಿ ಆದರೂ ಕೂಡ ರಾಖಿ ಕಟ್ಟಬಹುದು, ಕಟ್ಟಿಸಿಕೊಳ್ಳಬಹುದು. ಈ ಪವಿತ್ರ ರಾಖಿ ಹಬ್ಬದ  ಸಂತಸದ ಕ್ಷಣವನ್ನು ನಮ್ಮ ನಮ್ಮ ಸಹೋದರ ಸಹೋದರಿಯರೊಂದಿಗೆ ಕಳೆಯೋಣ. ಯಾವುದೋ ಚಿಕ್ಕ ವಿಷಯಕ್ಕೆ ಒಂದು ವೇಳೆ ಮಾತು ಬಿಟ್ಟಿದ್ದರೆ ಈ ದಿನ ಸ್ವಾಭಿಮಾನವನ್ನು ಬಿಟ್ಟು ಸಂಬಂಧಕ್ಕೆ ಬೆಲೆಕೊಟ್ಟು  ಅಣ್ಣ- ತಂಗಿಯರ ಹಾಗೂ ಅಕ್ಕ -ತಮ್ಮರ  ಸಂಬಂಧಕ್ಕೆ ಬೆಲೆ ಕೊಡೋಣ.


ಲೇಖಕರು  - ಶ್ರೀ ಮುತ್ತು ಯ.ವಡ್ಡರ ,  ಶಿಕ್ಷಕರು ,  ಬಾಗಲಕೋಟ , 9845568484   

Terms | Privacy | 2024 🇮🇳
–>