-->

Kannada subhashitha - ಕನ್ನಡ ಸುಭಾಷಿತ ಸಂಗ್ರಹ 8

ನಿಮಗೆ ಕಿರಿಕಿರಿ ಮಾಡಲೆಂದೇ ಕೆಲವರು ಎಲ್ಲ ಪ್ರಯತ್ನ ಮಾಡುತ್ತಾರೆ; ನೀವು ತಲೆ ಕೆಡಿಸಿಕೊಳ್ಳಲಿಲ್ಲವೆಂದರೆ ಅವರೇ ಕಿರಿಕಿರಿ ಮಾಡಿಕೊಂಡು ಪರಚಿಕೊಳ್ಳುತ್ತಾರೆ!

ನಿಜವಾದ ಆತ್ಮನ ವಿಷಯವನ್ನು ನೀವು ಅರಿತುಕೊಳ್ಳಿ,ಇತರರಿಗೆ ಬೋದಿಸಿ. ನಿದ್ರಿಸುತ್ತಿರುವ ಜೀವವನ್ನು ಸಂಭೋಧಿಸಿ,ಆಗ ನೋಡಿ ಹೇಗೆ ಅದು ಜಾಗೃತವಾಗುತ್ತದೆ ಎಂಬುದನ್ನು, ನಿದ್ರಿಸುತ್ತಿರುವ ಜೀವ ಜಾಗೃತವಾಗಿ ತನ್ನ ಅರಿವಿನಿಂದ ಕಾರ್ಯೋನ್ಮುಖವಾದಾಗ ಶಕ್ತಿ ಸ್ಪುರಿಸುವುದು,ಮಹಿಮೆ ಮೂಡುವುದು, ಕಲ್ಯಾಣವಾಗುವುದು, ಪಾವಿತ್ರ್ಯ ಸಿದ್ಧಿಸುವುದು ಅಂತೆಯೇ ಎಲ್ಲಾ  ಉತ್ಕೃಷ್ಟ ವಿಷಯಗಳೆಲ್ಲಾ ಒಂದೊಂದಾಗಿ ಪ್ರಕಟವಾಗುವವು.
 

ತಾಯಿ  ಮತ್ತು ಹೆಂಡತಿಯನ್ನ ಅಳತೆ ಮೀರಿ ಪ್ರೀತಿಸಿ ಗೌರವಿಸಿ ಕಾರಣ ತಾಯಿ ಈ ಪ್ರಪಂಚಕ್ಕೆ ಕರೆತಂದವರು ಹೆಂಡತಿ ಈ ಪ್ರಪಂಚವನ್ನೇ ಮರೆತು ನಿಮ್ಮನ್ನೇ ನಂಬಿ ಬಂದವರು.

ಮನುಷ್ಯ ಮನುಷ್ಯನಿಗೆ ಕೊಡುವ ಅತಿ ದೊಡ್ಡ ಉಡುಗೊರೆ ಎಂದರೆ ಪ್ರೀತಿ ,ವಿಶ್ವಾಸ , ಗೌರವ ಹಾಗೂ ನಂಬಿಕೆ. ಇದು ಹಣದಿಂದ ಖರೀದಿಸಿ ಕೊಡುವುದಲ್ಲ ನಮ್ಮ ಹೃದಯಂತರಾಳದಿಂದ ಕೊಡುವುದು .

ಒಳ್ಳೆಯತನದಿಂದ ಸ್ನೇಹಿತರನ್ನೂ ಬಂಧುಗಳನ್ನೂ ಒಲಿಸಿಕೊಳ್ಳಬೇಕು. ಸ್ತ್ರೀಯರನ್ನೂ ಸೇವಕರನ್ನೂ ದಾನ ಮತ್ತು ಗೌರವ ಕೊಟ್ಟು ಗೆಲ್ಲಬೇಕು. ಇತರರನ್ನು ದಾಕ್ಷಿಣ್ಯ ತೋರಿ ವಶಮಾಡಿಕೊಳ್ಳಬೇಕು. 

ನಾನು ಮತ್ತಷ್ಟು ತಿಳಿಯಬೇಕು ಎಂಬುದು ಜ್ಞಾನ..ನನಗೆ ಎಲ್ಲವೂ ತಿಳಿದಿದೆ ಎನ್ನುವುದು "ಅಜ್ಞಾನ "
ತಾನೂ ತಿಳಿಯುತ್ತಾ ಪರರಿಗೆ ತಿಳಿಸುವುದು "ಸುಜ್ಞಾನ"

ಒಳ್ಳೆಯ ನಡತೆಯುಳ್ಳವರೂ, ಸಾಧುಗಳೂ , ಭಗವದ್ಭಕ್ತರೂ , ಯಾವ ಮಾರ್ಗದಲ್ಲಿ ಇರುತ್ತಾರೋ ಅದೇ ಮಾರ್ಗವು, ಯಾವ ಹೆದರಿಕೆ ಇಲ್ಲದೇ ಕ್ಷೇಮದಿಂದ ಕೂಡಿರುತ್ತದೆ.

ಯಾವುದೇ ಒಂದು ಮಠ ಅಥವಾ ಶಾಲೆಯನ್ನು ನೆಡೆಸಬೇಕಾದರೆ ಅದಕ್ಕೆ ತಕ್ಕದಾದ ಗುರುಗಳು ಇರಬೇಕು.ಹಾಗೆಯೇ ಒಂದು ಮನೆಯು ಸುವ್ಯವಸ್ಥಿತವಾಗಿ ಸಮಯಕ್ಕೆ ತಕ್ಕಂತೆ ಎಲ್ಲಾ ಕೆಲಸ ಕಾರ್ಯಗಳು ನೆಡೆದುಕೊಂಡು ಹೋಗಬೇಕಾದರೆ ಹಿರಿಯರ ಮಾರ್ಗದರ್ಶನ ಇರಬೇಕು.ಒಂದು ಊರಿನಲ್ಲಿ ಜನ ವಾಸ ಮಾಡಬೇಕಾದರೆ ಮೇಲ್ವಿಚಾರಣೆಗಾಗಿ ಅಲ್ಲಿ ಒಬ್ಬ ಯಜಮಾನ,ಅಥವ ನಾಯಕನ ಅವಶ್ಯಕತೆ ಇದೆ.ಇವು ಮೂರು ಇಲ್ಲದಿದ್ದರೆ ನುಲಿ ಹರಿದ ಹೊರಸಿನಂತೆ (ಅಂದರೆ ಕುಳಿತುಕೊಂಡರೆ ,ಕುಳಿತಲ್ಲಿಯೇ ಬೀಳುವಂತಹ ‌) ಪರಿಸ್ಥಿತಿ ಇರುತ್ತದೆ

ಕೆಲವೇ ಕ್ಷಣಗಳಲ್ಲಿ ಹಣ ಎನ್ನುವುದು ಬರೀ ಕಾಗದದ ಚೂರುಗಳಾಗಿರಬಹುದು  ಚಿನ್ನವು ಕೇವಲ ಒಂದು ಲೋಹವಾಗಿ ಬಿಡಬಹುದು ಆದರೆ ಸಂಬಂಧಗಳಿಗಿರುವ  ಬೆಲೆಯನ್ನು ದೇವರಿಗೂ ಕೂಡ ಕಡಿಮೆ ಮಾಡಲು ಸಾಧ್ಯವಿಲ್ಲ

ಬದುಕು ಸುಂದರ ಅನ್ನುವುದು ಬರೀ ಕಾಲ್ಪನಿಕ, ಅದನ್ನು ಸುಂದರವನ್ನಾಗಿ ಮಾಡುವುದು ನಮ್ಮ ಕಾಯಕ..

Kannada subhashitha - ಕನ್ನಡ ಸುಭಾಷಿತ ಸಂಗ್ರಹ 8

 

ಒಂದು ಕಲ್ಲು, ಎಷ್ಟು ವರ್ಷಗಳ ವರೆಗೆ ನೀರಲ್ಲಿದ್ದರೇನು, ನೆನೆದು ಮೆತ್ತಗಾಗುವುದೇ?
ಗಟ್ಟಿತನವಿಲ್ಲದ / ಚಂಚಲವಾದ ಮನಸ್ಸು.. ಎಷ್ಟು ಕಾಲದವರೆಗೂ ದೇವರನ್ನು ಪೂಜಿಸಿದರೆ ಏನು?
ಹೂತಿಟ್ಟ ನಿಧಿಯನ್ನು ಕಾಯುತ್ತಿದ್ದ ಭೂತದಂತೆ.
ಇದರ ಹಾಗೆ ವಿಧಿಯ ಕಾಟವು ನನಗಾಗಿತ್ತು ದೇವರೇ. ಇಲ್ಲಿ ಹೂತಿಟ್ಟ ನಿಧಿಯನ್ನು ಭೂತವು ಕಾಯುತ್ತಿದೆ, ಆದರೆ ಆ ಭೂತಕ್ಕೆ ಹೂತಿಟ್ಟ ನಿಧಿಯನ್ನು ಅಗೆದು ಹೊರತೆಗೆದು, ಅನುಭವಿಸಲು ಸಾಧ್ಯವಾಗುವುದಿಲ್ಲ.! ಹಾಗೆಯೇ ಇಷ್ಟಲಿಂಗವನ್ನು ಕೊರಳಲ್ಲಿ ಕಟ್ಟಿಕೊಂಡು, ಪೂಜಿಸಿಕೊಂಡು ಏನು ಪ್ರಯೋಜನ? ನಮ್ಮ ಮನಸ್ಸು ಧೃಡವಾಗಿರಬೇಕು, ಲಿಂಗಾಂಗ ಯೋಗ, ಶಿವಯೋಗ ಮಾಡಬೇಕು, ಅದನ್ನು ಅನುಭವಿಸಬೇಕು. ಇಲ್ಲದಿದ್ದರೆ ನೀರಿನಲ್ಲಿದ್ದು ಗಟ್ಟಿಯಾದ ಕಲ್ಲಿನಂತಾದರೆ ಯಾವುದೇ ಪ್ರಯೋಜನವಿಲ್ಲ

ಒಳ್ಳೆಯವರಾಗಲು ಹಣ ಬೇಕಿಲ್ಲ , ಸಣ್ಣದೊಂದು ನಗು ಸಾಕು.  ಪರಿಚಯವಾಗಲು ಮಾತು ಬೇಕಿಲ್ಲ ,
    ನಮ್ಮಲ್ಲಿರುವ ಗುಣ ಸಾಕು.  ಸ್ನೇಹಿತರಾಗಲು ಸಂಬಂಧ ಬೇಕಿಲ್ಲ , ಮನಸ್ಸಿನ ಭಾವನೆ ಸಾಕು.

ಉದ್ಯೋಗ ಮಾಡುವವರಿಗೆ ದಾರಿದ್ರ ವಿರದು, ಜಪತಪ ಮಾಡುವವನಿಗೆ ಪಾಪವಿರುವುದಿಲ್ಲ.. ವಿವಾದದ ವೇಳೆಯಲ್ಲಿ ಮೌನವಹಿಸಿದವರಿಗೆ ಕಲಹ ಇರುವುದಿಲ್ಲ.ಮುಂಜಾಗ್ರತೆ ತೆಗೆದುಕೊಳ್ಳುವವರಿಗೆ ಭಯವಿರುವುದಿಲ್ಲ..

ಎಲ್ಲರೊಂದಿಗೆ ಅತ್ಯಂತ ನಿಷ್ಕಪಟಪ್ರೇಮದಿಂದ ವ್ಯವಹರಿಸಬೇಕು . ನಮ್ಮ ಮಾತಿನಲ್ಲಿ ಅಷ್ಟೇ ಅಲ್ಲದೇ ನಮ್ಮ ದೃಷ್ಟಿಯಲ್ಲಿಯೂ ಕೂಡ ಪ್ರೇಮವಿರಬೇಕು 

ಜಗತ್ತಿನಲ್ಲಿ ಯಾರೂ ಕೇವಲ ಅಲ್ಲ.ಕೀಳೂ ಅಲ್ಲ. ಸಮಯ ಬಂದಾಗ ಎಲ್ಲರೂ ಅನಿವಾರ್ಯವೇ. ಉಸಿರಿರುವಾಗ ಹೊಡೆದೋಡಿಸಿದ ಕಾಗೆಗೋಸ್ಕರ ಕೂಡಾ ಉಸಿರು ನಿಂತ ಮೇಲೆ ಕಾಯಬೇಕಾಗುತ್ತದೆ.

ಕೆಲವರು ನಿರ್ಮಲವಾಗಿ ನಿಮ್ಮನ್ನು ಪ್ರೀತಿಸುತ್ತಾರೆ..  ಹೆಚ್ಚಿನವರು ಪ್ರತಿಫಲಾಪೇಕ್ಷೆಯಿಂದ ಪ್ರೀತಿಸುತ್ತಾರೆ ,  ಮತ್ತು , ಇನ್ನು ಕೆಲವರು ನಿಮ್ಮನ್ನು ಇಷ್ಟವೇ ಪಡದಿರಬಹುದು...  ಏನೇ ಆದರೂ.... ಜೀವನದಲ್ಲಿ ನಿಮ್ಮತನವನ್ನು ಕಳೆದುಕೊಳ್ಳದಿರಿ"

ಜೀವನವೆಂಬ ತರಗತಿಯಲ್ಲಿ ಗಂಟೆಗೊಂದು ಪಾಠ, ನಿಮಿಷಕ್ಕೊಂದು ಅನುಭವ.ನಮ್ಮನ್ನು ನಾವು ತಿದ್ದಿಕೊಂಡರೆ ಪ್ರಪಂಚದಲ್ಲಿ ಒಬ್ಬ ಮೂರ್ಖ ಕಡಿಮೆಯಾದಂತೆ.

ಕುರುಡನು ಸೂರ್ಯ ಮತ್ತು ಚಂದ್ರರುಗಳನ್ನು ತನ್ನ ಕಣ್ಣುಗಳಿಂದ ನೋಡಲು ಸಾಧ್ಯವೇನು .ಅವರ ಇರುವಿಕೆಯನ್ನು ಅವನು ಬಿಸಿಲು ಮತ್ತು ತಣಿವುಗಳಿಂದ ಅನುಭವಿಸಿ,ಹಗಲು ಮತ್ತು ರಾತ್ರಿಗಳ ವ್ಯತ್ಯಾಸಗಳನ್ನು ತಿಳಿಯುತ್ತಾನೆ.ಹಾಗೆಯೇ ಆ ಪರಮಾತ್ಮನನ್ನು ನಾವು ಈ ಕಣ್ಣುಗಳಿಂದ ನೋಡಲು ಅಸಾಧ್ಯ.ಅವನ ಮಹಿಮೆಯನ್ನು ಮತ್ತು ಇರುವಿಕೆಯನ್ನು ನಾವು ನಮ್ಮ ಮನಸ್ಸಿಗೆ ಆಗುವ ಅನುಭವಗಳಿಂದ ತಿಳಿಯುತ್ತೇವೆ.

ವಿಷಾದ ಮನೋಭಾವ ಧರ್ಮವಲ್ಲ. ಅದು ಮತ್ತೇನಾದರೂ ಆಗಿರಬಹುದು.  ಯಾವಾಗಲೂ ಆನಂದವಾಗಿದ್ದು,ಮಂದಹಾಸದಿಂದ ಇದ್ದರೆ, ಅದು ಪ್ರಾರ್ಥನೆಗಿಂತ ಬೇಗ ದೇವರ ಬಳಿಗೆ ಕರೆದೊಯ್ಯುವುದು.

ಧ್ಯಾನ ಮಾಡುವಾಗ ಒಬ್ಬ ವ್ಯಕ್ತಿ ಭಗವಂತನಲ್ಲಿಯೇ ತಲ್ಲಿನನಾಗಿಬಿಡಬೇಕು. ಸುಮ್ಮನೆ ನೀರಿನ ಮೇಲೆ ತೇಲುತ್ತಿದ್ದರೆ ಸಮುದ್ರದ ತಳದಲ್ಲಿರುವ ರತ್ನಗಳನ್ನು ತರಲು ಸಾಧ್ಯವೆ ?

–>